ಸೃಜನಾತ್ಮಕ ಕಲಿಕೆಗೆ ತಯಾರಿ ಕಲಿಕಾ ಹಬ್ಬ: ಮಲ್ಲಿಕಾರ್ಜುನ ಕಾವಲಿ

(ಸೈದಾಪುರ): ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಗುಣ ಮತ್ತು ಕಲೆಯನ್ನು ಹೊರಗೆಳೆಯಲು ಪೂರ್ವತಯಾರಿ ನಡೆಸುವ ಹಬ್ಬವೇ ಕಲಿಕಾ ಹಬ್ಬ ಎಂದು ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಕಾವಲಿ ಅಭಿಪ್ರಾಯಪಟ್ಟರು.
ಸಮೀಪದ ಗೌಡಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಸಿದ ಎಫ್ಎಲ್ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ. ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದೆ. ಇದರಿಂದ ಹೊಸ ಹೊಸ ಬಗೆಯ ಪಠ್ಯೇತರ ಚಟುವಟಿಕೆಯನ್ನು ಮಗು ಕಲಿಯಲು ಸಾಧ್ಯವಾಗುತ್ತದೆ. ಮಗುವಿನಲ್ಲಿ ಗುಪ್ತವಾಗಿರುವ ಜ್ಞಾನವನ್ನು ಚಟುವಟಿಕೆಯ ಮೂಲಕ ತೆರೆದಿಡಬಹುದು. ಇದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕವಾಗಿ ಬಲಗೊಳ್ಳುವಂತೆ ಕಲಿಕಾ ಹಬ್ಬ ಮಾಡುತ್ತದೆ. ಶಿಕ್ಷಕರು ವರ್ಷವಿಡಿ ಮಕ್ಕಳಿಗೆ ತರಗತಿಯಲ್ಲಿ ಪಾಠಬೋಧನೆ ಮಾಡುವುದರಿಂದ ಪುಸ್ತಕದ ಹುಳಗಳನ್ನಾಗಿ ಮಾಡಿದಂತಾಗುತ್ತದೆ. ಅದರ ಜೊತೆಗೆ ಚಟುವಟಿಕೆ ಆಧಾರಿತ ಕಲೆಯನ್ನು ಮಕ್ಕಳಲ್ಲಿ ತುಂಬಿದರೆ ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಕಲಿಸಿಕೊಟ್ಟಾಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಪರಶುರಾಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕ ಘಟಕದ ಉಪಾಧ್ಯಕ್ಷ ದೇವಪುತ್ರ, ಕಿಲ್ಲನಕೇರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀಲಾ, ಸಿಆರ್ಪಿ ಮಲ್ಲಪ್ಪ, ಸಹ ಶಿಕ್ಷಕರಾದ ಶಿವಕುಮಾರ, ಭೀಮರಾಯ, ಗ್ರಾಮ ಪಂಚಾಯತಿ ಸದಸ್ಯರು ಊರಿನ ಮುಖಂಡರು, ನಿಯೋಜಿತ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.