ಯಾದಗಿರಿ | ಯುವತಿಯರ ನಿಗೂಢ ಸಾವಿನ ಪ್ರಕರಣ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಯಾದಗಿರಿ: ಅಲೆಮಾರಿ ವೇಷಗಾರ ಸಮುದಾಯದ ಚಿಂದಿ ಆಯುವ ಇಬ್ಬರು ಯುವತಿಯರ ನಿಗೂಢ ಸಾವಿನ ಪ್ರಕರಣ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಮತ್ತು ಕುಟುಂಬದವರಿಗೆ ಸರಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಪರ ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಸುಭಾಷ ವೃತ್ತದಿಂದ ಎಸ್.ಪಿ., ಡಿಸಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಪ್ರತಿಭಟನಾಕಾರರು ನಂತರ ಮನವಿ ಸಲ್ಲಿಸಿದರು. ಗುರುಮಠಕಲ್ ಇಂದಿರಾ ನಗರದ ವಾರ್ಡ ನಂ. 10ರ ಅಮೆಲಾರಿ ವೇಷಗಾರ ಸಮುದಾಯದ ಶ್ಯಾಮಮ್ಮ ಗಂ. ಹುಸೇನಪ್ಪ ಸಿರಿಗಿರಿ (19) ಹಾಗೂ ಸಾಯಮ್ಮ ತಂ. ಭೀಮಪ್ಪ ಸಿರಿಗಿರಿ (15) ಮನೆಯಿಂದ ಚಿಂದಿ ಆಯಲು ಹೋಗಿ, ಫೆಬ್ರವರಿ 12ರಂದು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಿ, ಬಡ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ಕುಟುಂಬದವರಿಗೆ ನೌಕರಿ ಕೊಡುವ ಮೂಲಕ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದರು.
ಅಲೆಮಾರಿಗಳ ರಾಜ್ಯಾಧ್ಯಕ್ಷ ಆಂಜಿನೇಯ, ಮಾದಿಗ ದಂಡೋರ ರಾಜ್ಯಾಧ್ಯಕ್ಷ ನರಸಪ್ಪ, ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ದಸಂಸ ಜಿಲ್ಲಾಧ್ಯಕ್ಷ ಶರಣು ಎಸ್.ನಾಟೇಕರ್, ಅಲೆಮಾರಿಗಳ ಚಿಂದಿ ಆಯುವರ ಸಮಾಜದ ಮುಖಂಡ ಸಹದೇವ, ಮೋತಿ ಯಲ್ಲಪ್ಪ, ರಮೇಶ, ತಾಲೂಕು ಅಧ್ಯಕ್ಷ ಯಮನಪ್ಪ, ಜೈರಾಮ ಯಣ್ಣಿ, ಬಸವರಾಜ ಕೊಂಡ್ರು, ಮಹೇಶ ಸೈದಾಪೂರ, ನಾಗರಾಜ ಗುರುಮಠಕಲ್, ಸೈದು ವಿಭೂತಿ, ರಂಗಮುನಿದಾಸ ರಾಯಚೂರು ಇದ್ದರು.
ಪಿಎಸ್ಐ ವಿರುದ್ಧ ಹಲ್ಲೆ ದೂರು ನೀಡಿದ ವೈದ್ಯ:
ಪ್ರತಿಭಟನಾ ಮೆರವಣಿಗೆ ವೇಳೆ ಪಿಎಸ್ಐ ಮಂಜನಗೌಡ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೋರನಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಅರುಣ ಪಾಟೀಲ ಅವರು ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ತೆರಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಡಿಎಸ್ಪಿ ನೇತೃತ್ವದಲ್ಲಿ ತನಿಖೆ: ಎಸ್ಪಿ
ವೈದ್ಯರ ನಿಯೋಗ ದೂರು ನೀಡಿದ್ದು, ಈ ಘಟನೆ ಸಂಬಂಧ ಡಿಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ ಶಂಕರ ತಿಳಿಸಿದರು.