ಯಾದಗಿರಿ: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ:
ಕಡುಬಡ ಕೋಲಿ ಸಮಾಜ ಎಸ್.ಟಿ ವರ್ಗಕ್ಕೆ ಸೇರಿಸಲು ಶಕ್ತಿಮೀರಿ ಪ್ರಯತ್ನ; ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಚಿಂಚಣಸೂರ್

ಯಾದಗಿರಿ: ಅತ್ಯಂತ ಕಡು ಬಡವ ಸಮಾಜವಾಗಿರುವ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಅವರು ಹೇಳಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ,ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಸಮಿತಿ ಹಾಗೂ ನಗರಸಭೆ, ಯಾದಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶ್ರೀ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡಿದರು .
ಕೋಲಿ ಸಮಾಜ ಅತ್ಯಂತ ಕಡುಬಡವ ಸಮಾಜ ವಾಗಿದ್ದು, ಮಹಿಳೆಯರು ಇನ್ನೂ ಕೂಲಿ ಕೆಲಸಕ್ಕೆ ಹೋಗುವಂತಹ ಪರಿಸ್ಥಿತಿ ಇದೆ. ಅದರಂತೆ ಸರ್ಕಾರಿ ಕೆಳದರ್ಜೆಯ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲು, ಉನ್ನತ ವಿದ್ಯಾಭ್ಯಾಸಕ್ಕಾಗಿ ಪರಿಶಿಷ್ಟ
ಪಂಗಡ ಮೀಸಲಾತಿ ಅತ್ಯಂತ ಅವಶ್ಯಕವಾಗಿದೆ. ಅದರಂತೆ ಈ ಸಮಾಜದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಲು ಈ ಮೀಸಲಾತಿಯ ಅವಶ್ಯಕತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಶಿಷ್ಟ ಪಂಗಡ ವರ್ಗದ ಪಟ್ಟಿಯಲ್ಲಿ ಸೇರ್ಪಡಿಸಲು, ಶಕ್ತಿಮೀರಿ, ಕೊನೆಯುಸಿರಿನವರೆಗೂ ಹೋರಾಡುವುದಾಗಿ ತಿಳಿಸಿದ ಅವರು ಸಮಾಜದ ಒಗ್ಗಟ್ಟು ಮತ್ತು ಐಕ್ಯತೆಯಿಂದ ಮಾತ್ರ ಇದು ಸಾಧ್ಯವಿದೆ ಎಂದು ಹೇಳಿದರು.
ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಈ ಜನಾಂಗವನ್ನು ಪ್ರವರ್ಗ- 1 ರ ಪಟ್ಟಿಗೆ ಸೇರಿಸಲಾಗಿತ್ತು. ಈ ಜನಾಂಗ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರಬೇಕಾದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ಪಡೆಯೋದು ಅತ್ಯಂತ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಈ ಮೀಸಲಾತಿ ಪಡೆಯಲು ಪ್ರಯತ್ನಿಸುವ ಅಗತ್ಯವಿದೆ ಎಂದು ಹೇಳಿದರು.
ನಿಜಶರಣ ಅಂಬಿಗರ ಚೌಡಯ್ಯ ಜನಾಂಗದವರಾದ ಕೋಲಿ ಸಮಾಜ ಸಾಮಾಜಿಕವಾಗಿ,ಆರ್ಥಿಕವಾಗಿ, ಶೈಕ್ಷಣಿಕವಾಗಿ, ಮುಂದೆ ಬರಬೇಕಾದಲ್ಲಿ ಈ ಮೀಸಲಾತಿ ಮುಖ್ಯ,ಈ ದಿಸೆಯಲ್ಲಿ ಒಗ್ಗಟ್ಟಾಗಿ ದೊಡ್ಡ ಪ್ರಮಾಣದ ಹೋರಾಟ ನಾವೆಲ್ಲರೂ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ, ನರೋಣ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರು ಡಾ. ಭೀಮರಾಯ ಅರಕೇರಿ ಅವರು ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ಅವರು ಸಾಮಾಜಿಕ ತಾರತಮ್ಯ, ಲಿಂಗ ತಾರತಮ್ಯವನ್ನು ಹೋಗಲಾಡಿಸಲು,ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧ ಕ್ರಾಂತಿಕಾರಿ ವಚನಗಳ ಮೂಲಕ ಸಮಾಜ ಜಾಗೃತಗೊಳಿಸುವ ಕಾರ್ಯ ಮಾಡಿದರು. ಮೂಡನಂಬಿಕೆ,ಡಾಂಭಿಕ ಭಕ್ತಿ, ಶೋಷಣೆ, ಸಾಮಾಜಿಕ ತಾರತಮ್ಯದ ವಿರುದ್ಧ ಕ್ರಾಂತಿಕಾರಿ ವಚನಗಳನ್ನು ವಿಡಂಬನಾತ್ಮಕ ರೀತಿಯಲ್ಲಿ ಜನರಿಗೆ ತಿಳಿಹೇಳಿ ಸಮ ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಲಿತಾ ಮೌಲಾಲಿ ಅನಪುರ ಅವರು ಕೋಲಿ ಸಮಾಜ ಒಗ್ಗಟ್ಟಿನಿಂದ ಪ.ಪಂಗಡ ಮೀಸಲಾತಿ ಪಡೆಯೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಸಮಾಜದ ಮುಖಂಡರಾದ ಮಹೇಶ್ ಮುದ್ನಾಳ, ಉಪಸ್ಥಿತರಿದ್ದರು. ಡಾ ಶ್ರೀನಿವಾಸ್ ಕಾರ್ಯಕ್ರಮ ನಿರ್ವಹಿಸಿದರು.