ಯಾದಗಿರಿ | ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೆ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಎಸ್ಪಿಗೆ ದೂರು
![ಯಾದಗಿರಿ | ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೆ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಎಸ್ಪಿಗೆ ದೂರು ಯಾದಗಿರಿ | ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೆ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಎಸ್ಪಿಗೆ ದೂರು](https://www.varthabharati.in/h-upload/2025/01/25/1317790-whatsapp-image-2025-01-25-at-70612-pm.webp)
ಯಾದಗಿರಿ : ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಪಟ್ಟಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯವರಿಂದ ಒಂದು-ಎರಡು ಕಂತು ಹಣ ಕಟ್ಟಲು ವಿಳಂಬವಾಗಿದ್ದಕ್ಕೆ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯಾದಗಿರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್, ಆಶೀರ್ವಾದ ಮೈಕ್ರೋ ಫೈನಾನ್ಸ್ , ಗ್ರಾಮ ಶಕ್ತಿ ಮೈಕ್ರೋ ಫೈನಾನ್ಸ್, ಧರ್ಮಸ್ಥಳ ಗ್ರಾಮಾಬಿವೃದ್ಧಿ ಸಂಘ, ಸಮಸ್ತ ಮೈಕ್ರೋ ಫೈನಾನ್ಸ್, ನವಚೈತನ್ಯ ಮೈಕ್ರೋ ಫೈನಾನ್ಸ್, ಆರ್.ಬಿ. ಎಲ್. ಮೈಕ್ರೋ ಫೈನಾನ್ಸ್, ಸೇರಿದಂತೆ ಒಟ್ಟು 8 ಮೈಕ್ರೋ ಫೈನಾನ್ಸ್ ಕಂಪನಿಯವರಿಂದ ಸಾಲ ಪಡೆದು ನಾವು ಕಷ್ಟ ಅನುಭವಿಸುತ್ತಿದ್ದೆವೆ ಎಂದರು.
ಪ್ರತಿವಾರ ಹಾಗೂ ಕೆಲವು ಸಂಘಗಳಿಗೆ ತಿಂಗಳಿಗೆ ನಿಯಮಿತವಾಗಿ ಸಾಲ ಬಡ್ಡಿ ಕಂತು ಕಟ್ಟುತ್ತಾ ಬರುತ್ತಿದ್ದೇವೆ. ಆದರೆ ಯಾವಾಗಲಾದರೂ ಅನಿವಾರ್ಯ ಸಂದರ್ಭದಲ್ಲಿ ಒಂದು ಕಂತು ಇಲ್ಲವೇ ಎರಡು ಮೂರು ಕಂತುಗಳ ಹಣ ಕಟ್ಟಲು ವಿಳಂಬವಾದರೆ ಈ ಸಂಘದವರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ.
ನೇರವಾಗಿ ರಾತ್ರಿವೇಳೆ ಅಂದರೆ ಸಂಜೆ 6 ಗಂಟೆಗೆ ನಂತರ 8-9 ಗಂಟೆ ಹೊತ್ತಿನಲ್ಲಿ ಸುಮಾರು 7-8 ಜನ ಸಿಬ್ಬಂದಿಗಳು ಮನೆಗೆ ಬಂದು ತಕ್ಷಣ ಹಣ ಕಟ್ಟಬೇಕು ಎಂದು ಒತ್ತಾಯ ಮಾಡುತ್ತಾರೆ. ಸ್ವಲ್ಪ ಸಮಸ್ಯೆ ಇದೆ ಸಮಯ ಕೊಡಿ ಎಂದರೆ ಹಗುರವಾಗಿ ಮಾತನಾಡುವುದು ಹಾಗೂ ಏಕವಚನ ಮಾತನಾಡುವುದು ಮಾಡುತ್ತಿದ್ದಾರೆ. ಮೊದಲೇ ಕಡುಬಡವರಾಗಿರುವ ನಾವು ನಿತ್ಯ ಕೂಲಿ ಇಲ್ಲವೇ ಸಣ್ಣ ಪುಟ್ಟ ಬೀದಿಬದಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೆವೆ ಸ್ವಲ್ಪ ವಿಳಂಬವಾಗಿದ್ದಕ್ಕೆ ಇನ್ನಿಲ್ಲದ ಕಿರುಕುಳ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ನಾವು ಹಣ ಪಾವತಿ ಮಾಡುವುದಕ್ಕೆ ನಿರಾಕರಿಸಿಲ್ಲ, ಆದರೆ ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದರೂ ಅದಕ್ಕೆ ಯಾವುದೇ ಕಿಮ್ಮತ್ತು ನೀಡದೇ ನಮಗೆ ನಿರಂತರ ಕಿರಕುಳ ನೀಡುತ್ತಿದ್ದಾರೆ. ನಮಗೆ ತೊಂದರೆ ಕೊಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು, ಸಮಯಾವಕಾಶ ಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಶಬಿ, ರಾಜೇಶ್ವರಿ, ಅಕ್ಕಮ್ಮ, ರಸೂಲಬಿ, ಸೈದಾಬಿ, ನೂರಜಾ, ದೌಲಬಿ, ರಾಣುಬಾಯಿ ಇದ್ದರು.