ಯಾದಗಿರಿ | ಪತ್ರಕರ್ತರು ಸಾಮಾಜಿಕ ಕಳಕಳಿಯ ವರದಿ ಮಾಡಲಿ : ನ್ಯಾ.ಮರಿಯಪ್ಪ
![ಯಾದಗಿರಿ | ಪತ್ರಕರ್ತರು ಸಾಮಾಜಿಕ ಕಳಕಳಿಯ ವರದಿ ಮಾಡಲಿ : ನ್ಯಾ.ಮರಿಯಪ್ಪ ಯಾದಗಿರಿ | ಪತ್ರಕರ್ತರು ಸಾಮಾಜಿಕ ಕಳಕಳಿಯ ವರದಿ ಮಾಡಲಿ : ನ್ಯಾ.ಮರಿಯಪ್ಪ](https://www.varthabharati.in/h-upload/2025/01/25/1317816-untitled-50.webp)
ಯಾದಗಿರಿ : ಯಾವುದೇ ಸುದ್ದಿ ಜನರಿಗೆ ತಲುಪಲು ಪತ್ರಕರ್ತರ ಪಾತ್ರ ಮಹತ್ವದ್ದಾಗಿದ್ದು, ಸಮಾಜ ತಿದ್ದುವಲ್ಲಿ ಬಹಳಷ್ಟು ಪ್ರಮುಖ ವಹಿಸುತ್ತಾರೆ. ಹಾಗಾಗಿ, ಸಾಮಾಜಿಕ ಕಳಕಳಿಯಿಂದ ಪರಿಣಾಮಕಾರಿಯಾಗಿ ವರದಿ ಮಾಡಿ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.
ನಗರದಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಷ್ಟೋ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಸುದ್ದಿಗಳು ಮಾಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಪತ್ರಕರ್ತರು ಕೊಲೆಯಾದ ಘಟನೆಗಳು ನಡೆದಿವೆ. ಆದ್ದರಿಂದ, ಈ ವೃತ್ತಿಯಲ್ಲಿ ಕೆಲಸ ಮಾಡುವುದು ಅಷ್ಟೊಂದು ಸುಲಭವಿಲ್ಲ ಎಂದರು.
ಪತ್ರಕರ್ತರ ಕೆಲಸ ಬಹಳಷ್ಟು ಕಷ್ಟದ ಕೆಲಸವಾಗಿದ್ದರೂ, ಜನರು ಹೆದರುವುದು ಮಾಧ್ಯಮಗಳಿಗೆ ಮಾತ್ರ. ಅಧಿಕಾರಿಗಳು ಹೆದರಿಸಿದರೆ ಹಾಗೂ ಪೊಲೀಸರು ಕೇಸ್ ಹಾಕುತ್ತೇವೆ ಎಂದರೂ ಜನರು ಹೆದರುವುದಿಲ್ಲ. ಸಮಾಜವನ್ನು ನಿಕೃಷ್ಟ ಪರಿಸ್ಥಿತಿಗೆ ಒಯ್ಯುವಂತಹ ಕೃತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಜನರು ಕೂಡ ನೋಡಿಕೊಂಡು ಸುಮ್ಮನಿರುತ್ತಾರೆ. ಇಂತವುಗಳ ಬಗ್ಗೆ ವರದಿ ಮಾಡಿದರೆ ಇಂದಲ್ಲ, ನಾಳೆ ಜನರು ಪ್ರಶ್ನೆ ಮಾಡುವುದನ್ನು ಕಲಿಯಲಿದ್ದಾರೆ ಎಂದರು.
ಪೋಕ್ಸೊ ಕಾಯ್ದೆಯಡಿ ವರದಿ ಮಾಡುವಾಗ ಹೆಸರು ಹಾಗೂ ವಿಳಾಸ ಗೌಪ್ಯವಾಗಿ ಇಡಬೇಕು. ಇಂತಹ ಮಾಹಿತಿ ಪ್ರಕಟಿಸಿದರೆ ಅದು ಅಪರಾಧ ಆಗಲಿದೆ. ಇಂತಹ ಸೂಕ್ಷ್ಮತೆ ಅರಿತುಕೊಂಡು ಕೆಲಸ ಮಾಡಬೇಕು ಎಂದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ಪತ್ರಿಕೆಗಳು ಸಮಾಜದ ಕನ್ನಡಿ ಇದ್ದಂತೆ. ಪ್ರಶಸ್ತಿ ಎಂಬುದು ಜವಾಬ್ದಾರಿ ಹೆಚ್ಚಿಸಲಿದೆ. ಆದರೆ, ಕೆಲವೊಂದು ಪತ್ರಿಕೆಗಳಲ್ಲಿ ದುರ್ಬಳಕೆ ಮಾಡಿಕೊಳ್ಳುವುದು
ಅಧ್ಯಕ್ಷತೆ ವಹಿಸಿದ್ದ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಸಂಕಷ್ಟದಲ್ಲಿರುವ ಹಲವು ಪತ್ರಕರ್ತರಿಗೆ ಹಾಗೂ ಅವರ ಕುಟುಂಬದವರಿಗೆ ಸಂಘದಿಂದ ಇಲ್ಲಿಯವರೆಗೆ 2 ಲಕ್ಷದ 90 ಸಾವಿರ ರೂ. ನೆರವು ನೀಡಲಾಗಿದೆ. ಇತಿ-ಮಿತಿಯಲ್ಲೇ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕೆಲಸ ಮಾಡಲಾಗಿದೆ. ಸಂಘದ ಪ್ರಯತ್ನದಿಂದ ನಗರಸಭೆಯಿಂದ ಪತ್ರಕರ್ತರ ಆರೋಗ್ಯ ನಿಧಿ ಸ್ಥಾಪಿಸಿ ಅನುದಾನ ಮೀಸಲಿಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕದ ಸೋಮಶೇಖರ ಕಿಲಾರಿ, ಕರ್ನಾಟಕ ಮಾಧ್ಯಮ ಮಾನತಾ ಸಮಿತಿಯ ನೂತನ ಸದಸ್ಯ ಗುರುರಾಜ ಕುಲಕರ್ಣಿ, ಕೆಯುಡಬ್ಲೂಜೆಯ ರಾಜ್ಯಮಟ್ಟದ ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ ಪುರಸ್ಕೃತ ನಾಮದೇವ ವಾಟ್ಕರ್, ಕೆಯುಡಬ್ಲೂಜೆಯ ಯಜಮಾನ್ ಟಿ.ನಾರಾಯಣಪ್ಪ ಪ್ರಶಸ್ತಿ ಪುರಸ್ಕೃತ ವಿಜಯಭಾಸ್ಕರರೆಡ್ಡಿ, ಜಿಲ್ಲಾಡಳಿತದಿಂದ ಮಾಧ್ಯಮ ಕ್ಷೇತ್ರದಿಂದ ಪ್ರಶಸ್ತಿ ಪುರಸ್ಕೃತ ವಿಶಾಲಕುಮಾರ ಶಿಂಧೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಾಘವೇಂದ್ರ ಕಾಮನಟಗಿ, ವಡಗೇರಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ್ ಇದ್ದರು. ಪತ್ರಕರ್ತ ಮಲ್ಲಿಕಾರ್ಜುನ ಆಶನಾಳ ಸ್ವಾಗತಿಸಿದರು. ಪತ್ರಕರ್ತ ನರಸಪ್ಪ ನಾರಾಯಣೋರ್ ನಿರೂಪಿಸಿ, ವಂದಿಸಿದರು.