ಯಾದಗಿರಿ | ಗುರುಮಠಕಲ್ ತಾಪಂ ನವೀಕೃತ ಕಟ್ಟಡಕ್ಕೆ ಶಾಸಕ ಕಂದಕೂರ ಪೂಜೆ

ಯಾದಗಿರಿ : ಗುರುಮಠಲ್ ತಾಲೂಕಿನಲ್ಲಿ ತಾಪಂ ಕಚೇರಿಗೆ ಸರಿಯಾದ ಕೊಠಡಿ ಇಲ್ಲದೆ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಾಗಿತ್ತು, ಅದನ್ನು ಗಮನಿಸಿ, ಸೂಕ್ತ ಕಟ್ಟಡಕ್ಕಾಗಿ ಈ ಕಟ್ಟಡವನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಹೊಂದಲು ಕ್ರಮಕೈಗೊಳ್ಳಲಾಗುವುದು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ಪಟ್ಟಣದಲ್ಲಿ ತಾಪಂ ನವೀಕೃತ ಕಟ್ಟಡಕ್ಕೆ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಗುರುಮಠಕಲ್ ತಾಲೂಕಿನಲ್ಲಿ ಸರಿಯಾಗಿ ಇಲಾಖೆಗಳು ಇಲ್ಲದೇ ದೂರದ ಯಾದಗಿರಿಗೆ ಜನರು ಅಲೆದಾಡಬೇಕಾಗಿತ್ತು, ಈಗ ಗುರುಮಠಕಲ್ ತಾಲೂಕು ಆಗಿರುವುದರಿಂದ ಹಂತ ಹಂತವಾಗಿ ಇಲಾಖೆಗಳು ನಿರ್ಮಾಣಗೊಳ್ಳುತ್ತಿದ್ದು, ಅಧಿಕಾರಿಗಳಿಗೆ ಹಾಗೂ ಜನರಿಗೆ ಪ್ರಯೋಜನೆ ಆಗಲಿದೆ. ಮುಂದಿನ ದಿನಗಳಲ್ಲಿ ತಾಲೂಕು ಸಂಕೀರ್ಣ ಕಟ್ಟಡ ನಿರ್ಮಾಣವಾದಾಗ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಬರಲಿದ್ದು, ಆಗ ಜನರಿಗೆ ಪ್ರಯೋಜನವಾಗಲಿದೆ ಎಂದರು.
ಈ ಹಿಂದಿನ ತಾಪಂ ಕಟ್ಟಡದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ಮಾಡುವುದು ಕಷ್ಟಕರವಾಗಿತ್ತು, ಇದನ್ನು ಪರಿಗಣಿಸಿ, ಈ ಕಟ್ಟಡ ಆಯ್ಕೆ ಮಾಡಿಕೊಂಡು ಇಲ್ಲಿ ತಾಪಂ ಕಚೇರಿ ಪ್ರಾರಂಭಿಸಲಾಗಿದೆ. ಇನ್ಮುಂದೆ ಅಧಿಕಾರಿಗಳು ಸುಗಮವಾಗಿ ಕರ್ತವ್ಯ ನಿರ್ವಹಿಸಿ ಜನಪರ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಓರಾಡಿಯಾ, ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ, ಸಹಾಯಕ ಯೋಜನಾಧಿಕಾರಿ ಸಂತೋಷ ಕುಮಾರ, ಗುರುಮಠಕಲ್ ಇಒ ಅಮರೇಶ ಪಾಟೀಲ, ಯಾದಗಿರಿ ಇಒ ಮಹಾದೇವಪ್ಪ, ಶಹಾಪೂರ ಇಒ ಬಸವರಾಜ ಶರಬೈ, ಪ್ರಮುಖರಾದ ಜಿ.ತಮ್ಮಣ್ಣ, ಪ್ರಕಾಶ ನಿರೇಟಿ, ನವಾಜರಡ್ಡಿ ಪಾಟೀಲ, ಶರಣು ಆವಂಟಿ, ಮಲ್ಲಿಕಾರ್ಜುನ ಅರುಣಿ, ಬಾಲಪ್ಪ ದಾಸರಿ, ಆಶಣ್ಣ ಬುದ್ದಾ ಸೇರಿದಂತೆ ಇತರರಿದ್ದರು.
ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಿ :
ಗುರುಮಠಕಲ್ ತಾಲೂಕಿನಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು, ಎಲ್ಲಾ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಗ್ರಾಪಂ ಪಿಡಿಒಗಳಿಗೆ ತಾಕೀತು ಮಾಡಿದರು.
ಗುರುಮಠಕಲ್ ಪಟ್ಟಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಬೇಸಿಗೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಲಿದೆ, ಈ ಹಿಂದೆ ಬೇಸಿಗೆಯಲ್ಲಿ ಹಲವು ಹಳ್ಳಿಗಳ ಜನರು ನೀರಿನ ತೊಂದರೆಯಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ, ಇದನ್ನು ಗಮನದಲ್ಲಿಟ್ಟುಕೊಂಡು ಜಲಮೂಲಗಳ ಪತ್ತೆಯ ಜೊತೆಗೆ ಸಾದ್ಯವಾದಷ್ಟು ಜಾಗೃತರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಓರಾಡಿಯಾ, ಯೋಜನಾ ನಿರ್ದೇಶಕರಾದ ಸಿ.ಡಿ.ದೇವರಮನಿ, ಸಹಾಯಕ ಯೋಜನಾಧಿಕಾರಿ ಸಂತೋಷ ಕುಮಾರ, ಗುರುಮಠಕಲ್ ಇಒ ಅಮರೇಶ ಪಾಟೀಲ ಇದ್ದರು.