ಯಾದಗಿರಿ | ರಾಷ್ಟ್ರೀಯ ಮತದಾರರ ದಿನಾಚರಣೆ
ಮತದಾರರು ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು : ತಹಶೀಲ್ದಾರ್ ಹುಸೇನಸಾಬ್
![Photo of Program Photo of Program](https://www.varthabharati.in/h-upload/2025/01/25/1317820-whatsapp-image-2025-01-25-at-80149-pm.webp)
ಸುರಪುರ : ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರತಿಯೊಬ್ಬ ಪ್ರಜೆಗೂ ಮತದಾನ ಮೂಲಭೂತ ಹಕ್ಕು ನೀಡಲಾಗಿದೆ. ಒಬ್ಬ ಉತ್ತಮ ನಾಯಕನನ್ನು ಆಯ್ಕೆ ಮಾಡಿದರೆ ದೇಶದ ಅಭಿವೃದ್ಧಿಯಾಗುತ್ತದೆ. ಮತದಾರರು ದೇಶದ ಪ್ರಗತಿಗಾಗಿ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು ಎಂದು ತಹಶೀಲ್ದಾ ಎಚ್.ಎ.ಸರಕಾವಸ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಪ್ರಗತಿಗಾಗಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ವ್ಯಕ್ತಿ ಮೇಲಿದ್ದು, ಇದಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡುವುದು ಅತ್ಯಗತ್ಯ ಎಂದರು.
ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಪ್ರತಿವರ್ಷ ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದ್ದು, 2011ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದ ಅವರು, ʼಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆʼ ಈ ವರ್ಷದ ಧ್ಯೇಯವಾಕ್ಯ ಆಗಿದ್ದು, ಹೊಸ ಮತದಾರರಿಗೆ ನೊಂದಣಿಯನ್ನು ಉತ್ತೇಜಿಸುವುದು, ಸುಗಮಗೊಳಿಸುವುದು ಹಾಗೂ ನೊಂದಣಿಯನ್ನು ಗರಿಷ್ಠಗೊಳಿಸುವುದು ರಾಷ್ಟ್ರೀಯ ಮತದಾರರ ದಿನದ ಪ್ರಮುಖ ಉದ್ದೇಶ ಎಂದರು.
ಮತದಾರರಲ್ಲಿ ಜಾಗೃತಿ ಮೂಡಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ದಿನಾಚರಣೆ ಉದ್ದೇಶಗಳಾಗಿವೆ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿದರು.
ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು, ತಾಲೂಕು ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ಪ್ರ.ಕಾರ್ಯದರ್ಶಿ ನಂದಕುಮಾರ ಕನ್ನಳ್ಳಿ, ಮಲ್ಲಿಕಾರ್ಜುನ ಮಂಗಿಹಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಕುಮಾರ ಹೊಸಮನಿ ಸ್ವಾಗತಿಸಿದರು, ಶಿಕ್ಷಕ ಮಹಾದೇವಪ್ಪ ನಿರೂಪಿಸಿ, ಶಿರಸ್ತೇದಾರ ಬಸವರಾಜ ಪಾಟೀಲ ವಂದಿಸಿದರು.
ಯುವ ಮತದಾರರಿಗೆ ಐಡಿ ಕಾರ್ಡು ವಿತರಣೆ :
ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಅಧಿಕಾರಿಗಳಿಗೆ ಅಭಿನಂದನೆ :
ಚುನಾವಣಾ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಾದ ಪ್ರಕಾಶ ಶಿಕ್ಷಕರು ಶೆಳ್ಳಗಿ, ಬೀಬಿ ಇಸರ್ ಕೆಂಭಾವಿ ವಲಯ, ಭೀಮಬಾಯಿ ಕಕ್ಕೇರಾ ಹೋಬಳಿ, ವಿಜಯಕುಮಾರ ಗೋಡಿಹಾಳ.ಟಿ ಅವರಿಗೆ ಉತ್ತಮ ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್ಓ), ಹಾಗೂ ಮತಗಟ್ಟೆ ಮೇಲ್ವಿಚಾರಕರಾದ ಸಲೀಂ ನಗರಸಭೆ ಸುರಪುರ ಹಾಗೂ ರಾಜೇಸಾಬ ಕೆಂಭಾವಿ ಅವರಿಗೆ ಉತ್ತಮ ಮತಗಟ್ಟೆ ಮೇಲ್ವಿಚಾರಕರು ಹಾಗೂ ತರಬೇತುದಾರರಾದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಡಾ.ಸಿದ್ಧರಾಮ ಪಾಟೀಲ ಅವರಿಗೆ ಉತ್ತಮ ಮಾಸ್ಟರ್ ಟ್ರೈನರ್ ಆಗಿ ತಾಲೂಕು ಆಡಳಿತ ವತಿಯಿಂದ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.