ಯಾದಗಿರಿ | ವಿದ್ಯುತ್ ಸಮಸ್ಯೆ ಪರಿಹರಿಸಲು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ
ವಿದ್ಯುತ್ ತಂತಿ ಪರಿವರ್ತಕ ಬದಲಾಯಿಸದಿದ್ದಲ್ಲಿ ಪ್ರತಿಭಟನೆ : ಹಣಮಂತ್ರಾಯ

ಸುರಪುರ : ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಮೂರು ನಾಲ್ಕು ದಶಕಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಮತ್ತು ವಿದ್ಯುತ್ ಪರಿವರ್ತಕ (ಟಿ.ಸಿ)ಗಳಿದ್ದು, ಕೂಡಲೇ ಅವುಗಳನ್ನು ಬದಲಾಯಿಸಬೇಕು, ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದಲಾಪುರ ತಿಳಿಸಿದ್ದಾರೆ.
ನಗರದ ರಂಗಂಪೇಟೆಯ ಜೆಸ್ಕಾಂ ಇಲಾಖೆ ಕಚೇರಿ ಮುಂದೆ ಸಂಘಟನೆಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಹಳೆಯ ವಿದ್ಯುತ್ ತಂತಿಗಳಿಂದ ಎಷ್ಟೋ ಗ್ರಾಮಗಳಲ್ಲಿ ಅನಾಹುತ ಸಂಭವಿಸುತ್ತಿವೆ. ಕಳೆದ ಮೂರು ದಿನಗಳ ಹಿಂದೆ ಜಾಲಿಬೆಂಚಿ ಗ್ರಾಮದಲ್ಲಿ ದೊಡ್ಡ ಅನಾಹುತ ಸಂಭವಿಸಿದೆ. ಮುಂದೆ ಬೇರೆ ಎಲ್ಲಿಯೂ ಅಂತಹ ಅನಾಹುತ ಆಗದಂತೆ ಕ್ರಮ ಕೈಗೊಳ್ಳಲು ಹಳೆಯ ವಿದ್ಯುತ್ ತಂತಿ ಮತ್ತು ಪರಿವರ್ತಕಗಳ ಬದಲಾಯಿಸಬೇಕು. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ತಮ್ಮ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಫೀಕ್ ಅವರು ಮಾತನಾಡಿ, ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಸಾಹೇಬಗೌಡ ಮದಲಿಂಗನಾಳ, ಮಲ್ಲಣ್ಣ ಹಾಲಬಾವಿ,ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ವೆಂಕಟೇಶಗೌಡ ಕುಪಗಲ್, ನಾಗಪ್ಪ ಕುಪಗಲ್, ಶಿವನಗೌಡ ರುಕ್ಮಾಪುರ,ಶಾಂತಪ್ಪ ತಿಪನಟಗಿ,ಮೌನೇಶ ಅರಳಹಳ್ಳಿ,ಪ್ರಭು ದೊರೆ, ತಿಪ್ಪಣ್ಣ ತಳವಾರ, ಪರಮಣ್ಣ ಬಾಣತಿಹಾಳ, ಪರಮಣ್ಣ ಬಾಣತಿಹಾಳ,ಹಣಮಂತ ಕುಂಬಾರಪೇಟ, ದೇವಿಂದ್ರಪ್ಪಗೌಡ ಸೂಗೂರ, ಶಿವಲಿಂಗಪ್ಪ, ಶಾಂತಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.