ಮೂಡುಬಿದಿರೆ: ಸಾಮಾಜಿಕ ಪರಿವರ್ತನೆಯಲ್ಲಿ ಮೌಲ್ಯಗಳ ಸಂರಕ್ಷಣೆ ಸಾಹಿತಿಗಳಿಂದಾಗಲಿ: ಪ್ರೊ. ಶ್ರೀಪತಿ ಕಲ್ಲೂರಾಯ

Update: 2016-02-15 13:52 GMT

 ಮೂಡುಬಿದಿರೆ: ಇಂದು ಆರೈಕೆ, ಪ್ರೀತಿ, ಸಾಂತ್ವನ ಮತ್ತು ಮಾರ್ಗದರ್ಶನದಂತಹ ಕೌಟುಂಬಿಕ ವಿಷಯಗಳೂ ಕಮರ್ಷಿಯಲ್ ಹಾದಿಯಲ್ಲಿವೆ. ಸಾಮಾಜಿಕ ಪರಿವರ್ತನೆ ಅನಿವಾರ್ಯ ಬದಲಾವಣೆಯಾಗಿದೆ. ಆದರೆ ಇವುಗಳ ನಡುವೆ ಪಾರಂಪರಿಕ ಮಹತ್ವದ ಸಾಮಾಜಿಕ ಮೌಲ್ಯಗಳ ಸಂರಕ್ಷಣೆ ಸಾಹಿತಿಗಳಿಂದಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು. ಅವರು ರವಿವಾರ ಕಾಂತಾವರ ಕನ್ನಡ ಸಂಘದ ವತಿಯಿಂದ ಕನ್ನಡ ಭವನದಲ್ಲಿ ನಡೆದ ’ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಹದಿನಾಲ್ಕು ಕೃತಿಗಳ ಲೊಕಾರ್ಪಣೆ, ಅಲ್ಲಮಪ್ರಭು ಪೀಠದ 2013ರ ಸಾಲಿನ ಉಪನ್ಯಾಸಗಳ ಸಂಪುಟ ’ಕರಣ ಕಾರಣ -2’ ಲೋಕಾರ್ಪಣ , ಸಾಹಿತ್ಯೋತ್ಸವದ ಸಂಭ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಬೀದಿಗಿಳಿದು ಹೋರಾಡುವಲ್ಲಿ ಕರಾವಳಿಯ ಕನ್ನಡಿಗರು ಹಿಂದಿರಬಹುದು. ಆದರೆ ಸಾಹಿತ್ಯ ಸೇವೆಯ ದಾಖಲೆಯನ್ನು ಅಪರೂಪದ ಸಾಧನೆಗಳು ಇಲ್ಲಿನ ಕನ್ನಡಿಗರ ಅಮೂಲ್ಯ ಕೊಡುಗೆ ಎಂದವರು ಶ್ಲಾಘಿಸಿದರು.

ಮಂಗಳೂರಿನ ತಜ್ಞ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಅವರು ’ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಹದಿನಾಲ್ಕು ಕೃತಿಗಳು, ಅಲ್ಲಮಪ್ರಭು ಪೀಠದ 2013ರ ಸಾಲಿನ ಉಪನ್ಯಾಸಗಳ ಸಂಪುಟ ’ಕರಣ ಕಾರಣ -2’ ಲೋಕಾರ್ಪಣೆಗೊಳಿಸಿ ಮಾತನಾಡಿ ತುಳು ಸಹಿತ ಪ್ರಾದೇಶಿಕ ಭಾಷೆಗಳನ್ನು ಬೆಳೆಸುವ ಮೂಲಕ ಅಸಹಿಷ್ಣುತೆ, ನಿಶ್ಯಬ್ದವಾಗುತ್ತಿರುವ ಶಬ್ದಗಳ ಸವಾಲಿಗೆ ಉತ್ತರವಾಗಬೇಕು ಎಂದರು. ಎಂ.ಎಸ್. ರುದ್ರೇಶ್ವರಸ್ವಾಮಿಯವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಅಲ್ಲಮಪ್ರಭು ಪೀಠದ ಕಾರ್ಯಾಧ್ಯಕ್ಷ ಯಶೋಧರ ಪಿ.ಕರ್ಕೇರಾ ಉಪಸ್ಥಿತರಿದ್ದರು. ಅಪರಾಹ್ನ ಕು. ಶುಭಾಂಜನ ದೇವಾನಂದ ಭಟ್, ಬೆಳುವಾಯಿ ಅವರ ಸುಗಮ ಸಂಗೀತ ಮತ್ತು ಜಾನಪದ ಗೀತೆಗಳ ಗಾಯನ, ನುಡಿನಮನ ಉಪನ್ಯಾಸ ಮಾಲಿಕೆಯಲ್ಲಿ ಮಂಗಳೂರು ಆಕಾಶವಾಣಿಯ ಡಾ. ಸದಾನಂದ ಪೆರ್ಲ ಅವರು ರಾಷ್ಟ್ರಕವಿ ಗೋವಿಂದ ಪೈ ಅವರ ಕಾವ್ಯದ ಮರು ಓದು ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಠಲ ಬೇಲಾಡಿ ಕಾರ್ಯಕ್ರಮ ನಿರ್ವಹಿಸಿ ಕಲ್ಲೂರು ನಾಗೇಶ್ ವಂದಿಸಿದರು.

ನಾಡಿಗೆ 150ನೇ ನಮಸ್ಕಾರ!
         
  ಅವಿಭಜಿತ ದ.ಕ ಜಿಲ್ಲೆಯು ಕಾಸರಗೋಡೂ ಸೇರಿದಂತೆ ನಾಡಿಗೆ ಕೊಟ್ಟ ಸಾಧಕರನ್ನು ಹುಡುಕಿ ಹಿಡಿದು ಅವರ ಕುರಿತಾದ ಹೊತ್ತಗೆಯನ್ನು ಹೊರತಂದು ನಾಡನ್ನು ಕಟ್ಟುವುದು ಹೇಗೆ ಎನ್ನುವುದನ್ನು ದಾಖಲಿಸುವ ಪ್ರಯತ್ನ ’ನಾಡಿಗೆ ನಮಸ್ಕಾರ’ ಎನ್ನುವ ಗ್ರಂಥಮಾಲೆ. ರಾಜ್ಯವು ಸುವರ್ಣ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ (2006) ಸ್ಥಾಪಿಸಿದ ಈ ಮಾಲೆಯಲ್ಲಿ ಸಾರ್ವಜನಿಕರ ಬೆಂಬಲದಿಂದ ಸಂಘವು ಈಗಾಗಲೇ 136 ಹೊತ್ತಗೆಗಳನ್ನು ಹೊರತಂದಿದ್ದು ಇದೀಗ ಮತ್ತೆ ಹದಿನಾಲ್ಕು ಹೊತ್ತಗೆಗಳು ಅನಾವರಣಗೊಂಡು ನೂರೈವತ್ತರ ದಾಖಲೆ ನಿರ್ಮಿಸಿದೆ. ಈ ಬಾರಿ ಸಾಂಸ್ಕೃತಿಕ ರಾಯಭಾರಿ: ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ (ಲೇ: ಡಾ.ವಸಂತಕುಮಾರ್) , ರೈತಬಂಧು: ಶಿವಪುರ ಸುಬ್ಬಣ್ಣನಾಯಕ್ (ಲೇ: ಡಾ ವಸಂತಕುಮಾರ್) ,ಯಕ್ಷಗಾನ ಗುರುಕುಲ ರೂವಾರಿ: ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟ (ಲೇ: ಚಂದ್ರಶೇಖರ ಮಂಡೆಕೋಲು) ,ಕವಿಹೃದಯದ ಸಾಂಸ್ಕೃತಿಕ ಸಂತ: ಉಪ್ಪುಂದ ಚಂದ್ರಶೇಖರ ಹೊಳ್ಳ (ಡಾ. ಕನರಾಡಿ ವಾದಿರಾಜ ಭಟ್) ,ಕರಾವಳಿಯ ರಾಜಕೀಯ ಮುತ್ಸದ್ಧಿ: ಉರಿಮಜಲು ಕೆ. ರಾಮಭಟ್ (ಲೇ: ಡಾ. ಹೆಚ್. ಜಿ. ಶ್ರೀಧರ್) ,ಯಕ್ಷಗಾನದ ರಸಿಕರತ್ನ : ವಿಟ್ಲ ಗೋಪಾಲಕೃಷ್ಣ ಜೋಶಿ (ಲೇ: ಡಾ. ವಸಂತ ಕುಮಾರ್) ,ನವೋದಯ ಸಾಹಿತ್ಯದ ಕಲ್ಪತರು: ಎಮ್. ಎನ್. ಕಾಮತ್ (ಲೇ: ಬಿ. ಲೀಲಾ ಭಟ್) , ಸಮನ್ವಯ ಸಾಹಿತ್ಯದ ಲೇಖಕಿ: ಎ. ಪಿ. ಮಾಲತಿ (ಲೇ: ಡಾ. ಶೈಲಾ ಯು.) , ಜೈನಮಹಿಳೆ ಕಾವ್ಯನಾಮದ ಕವಯಿತ್ರಿ: ನೆಲ್ಲಿಕಾರು ರಾಧಮ್ಮ (ಲೇ: ರಾಜಶ್ರೀ ಹಂಪನಾ) ,ಕನ್ಯಾನದ ಭಾರತ ಸೇವಾಶ್ರಮದ ಸ್ಥಾಪಕ: ಧೀರೇಂದ್ರನಾಥ ಭಟ್ಟಾಚಾರ್ಯ (ಲೇ: ವಿಜಯಶೆಟ್ಟಿ ಸಾಲೆತ್ತೂರು) , ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ : ಕೆ. ಐತಪ್ಪ ನಾಕ್ (ಲೇ: ಪುಷ್ಪಲತಾ ಎಂ) , ಮಹಾಕಾವ್ಯಗಳ ಕವಿ: ಡಾ. ಪ್ರದೀಪ್ ಕುಮಾರ್ ಹೆಬ್ರಿ (ಲೇ: ದೀಪಾ ಫಡ್ಕೆ) , ಐತಿಹ್ಯ ಕಥೆಗಳ ರಾಜ: ಬೇಕಲ ರಾಮನಾಯಕ (ಲೇ: ಎ. ನರಸಿಂಹ ಭಟ್, ಕಾಸರಗೋಡು), ಹೊರನಾಡ ಕನ್ನಡ ಸೇನಾನಿ: ಹೆಚ್.ಬಿ.ಎಲ್ ರಾವ್ (ಲೇ: ಶ್ರೀನಿವಾಸ ಜೋಕಟ್ಟೆ) ಕೃತಿಗಳು ನೂರೈವತ್ತರ ನಮಸ್ಕಾರ ಮಾಲಿಕೆಯನ್ನು ಅಲಂಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News