ಮಂಗಳೂರು : ಗ್ರಾ.ಪಂ.ಗಳಲ್ಲಿ ಕುಮ್ಕಿ ಹಕ್ಕುದಾರರ ಸಭೆ: ಬಿಜೆಪಿ

Update: 2016-03-22 11:59 GMT

ಮಂಗಳೂರು, ಮಾ.22: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಎಲ್ಲಾ 230 ಗ್ರಾಮ ಪಂಚಾಯತುಗಳ ವ್ಯಾಪ್ತಿಯಲ್ಲಿ ಕುಮ್ಕಿದಾರರ ಸಭೆಯನ್ನು ಆಯೋಜಿಸಲಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಪ್ರತಾಪಸಿಂಹ ನಾಯಕ್ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾ.25ರಿಂದ ಎ.5ರವರೆಗೆ ಗ್ರಾಮ ಪಂಚಾಯತು ವ್ಯಾಪ್ತಿಗಳಲ್ಲಿ ಕುಮ್ಕಿದಾರರ ಸಭೆ ಜರುಗಲಿದೆ. ಸಭೆಗಳಲ್ಲಿ ನಿಗದಿತ ಅರ್ಜಿ ನಮೂನೆಗಳನ್ನು ವಿತರಿಸಿ ಕುಮ್ಕಿದಾರರ ವಿವರ ಮತ್ತು ಅವರು ಹೊಂದಿರುವ ಜಮೀನಿನ ಮಾಹಿತಿಯನ್ನು ಕೂಡಾ ಸಂಗ್ರಹಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬಿಜಿಪಿ ಆಡಳಿತ ಇದ್ದ ಸಂದರ್ಭದಲ್ಲಿ ರೈತರಿಗೆ ಗರಿಷ್ಠ 5 ಎಕರೆ ಕುಮ್ಕಿ ಜಮೀನನ್ನು ಉಚಿತವಾಗಿ ನೀಡುವ ಕುರಿತಾಗಿ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಸರಕಾರ ಅದನ್ನು ಬಳಸಿಕೊಂಡು ರೈತರಿಗೆ ಕುಮ್ಕಿ ಜಮೀನಿನ ಹಕ್ಕು ನೀಡಿ ಗೊಂದಲವನ್ನು ನಿವಾರಿಸ ಬೇಕು ಎಂದು ಪ್ರತಾಪಸಿಂಹ ನಾಯಕ್ ಆಗ್ರಹಿಸಿದರು.

ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇದೆ. ಈಗಾಗಲೇ ಅಲ್ಲಲ್ಲಿ ಜನತೆ ಹೋರಾಟಕ್ಕೆ ಇಳಿದಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದರೆ ರಾಜ್ಯ ಸರಕಾರ ಗಮನ ಹರಿಸುತ್ತಿಲ್ಲ ಎಂದು ಆಕ್ಷೇಪಿಸಿದರು.

ಗ್ರಾಮ ಪಂಚಾಯತು ಮಟ್ಟದಲ್ಲಿ ಜರುಗುವ ಸಭೆಗಳಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಜನತೆಗೆ ತಿಳಿಸುವುದಲ್ಲದೆ ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ಆಗ ಬಹುದಾದ ತೊಂದರೆಗಳ ಬಗ್ಗೆಯೂ ಚರ್ಚಿಸಲಾಗುವುದು. ಎತ್ತಿನಹೊಳೆ ಯೋಜನೆ ಕುರಿತಂತೆ ಜಿಲ್ಲಾ ಬಿಜೆಪಿಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರತಾಪಸಿಂಹ ನಾಯಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಜಿಲ್ಲಾ ಬಿಜಿಪಿ ಪ್ರಧಾನ ಕಾರ್ಯದರ್ಶಿಗಳಾದ ಸಂಜೀವ ಮಠಂದೂರು, ಕಿಶೋರ್ ರೈಘಿ, ಕೋಶಾಧಿಕಾರಿ ಸಂಜಯ ಪ್ರಭು ಮತ್ತು ಮಾಧ್ಯಮ ಪ್ರಮುಖ್ ದಿವಾಕರ ಸಾಮಾನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News