ಬಾಳಿಲ ಬಳಿ ವಿದ್ಯಾರ್ಥಿನಿಗೆ ಯುವಕನಿಂದ ಕಿರುಕುಳ ಆರೋಪಿ ಯುವಕ ಪರಾರಿ, ಆಕ್ರೋಶಿತರಿಂದ ಮನೆ-ಕೃಷಿಗೆ ಹಾನಿ
ಸುಳ್ಯ,ಮಾ.23 : ಬಮುಪ್ಪೇರ್ಯ ಗ್ರಾಮದ ಕಾಯರ ಎಂಬಲ್ಲಿ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ಯುವಕನೋರ್ವ ಕಿರುಕುಳ ನೀಡಿರುವುದಾಗಿ ದೂರು ದಾಖಲಾಗಿದ್ದು, ಆರೋಪಿಯ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿದೆ.
ಆರೋಪಿ ಪಯಾರಿಯಾಗಿದ್ದು, ಕೋಪಗೊಂಡ ಊರವರು ಆತ ವಾಸ್ತವ್ಯಕ್ಕಿದ್ದ ಮನೆ ಹಾಗೂ ಕೃಷಿಗೆ ಹಾನಿ ಮಾಡಿದ್ದಾರೆ.
ಕಾಯರ ಎಂಬಲ್ಲಿ ಕೇರಳದ ಕೊಟ್ಟಾಯಂನ ಜಿತಿನ್ ಎಂಬವರು ಕೆಲ ತಿಂಗಳ ಹಿಂದೆ ಜಾಗ ಖರೀದಿಸಿದ್ದು, ಇಲ್ಲಿ ಕೇರಳದ ಕೆಲವು ಯುವಕರು ಕೆಲಸಕ್ಕಿದ್ದರು. ಜಾಗದಲ್ಲಿಯೇ ಇಟ್ಟಿಗೆಯ ಮನೆಯನ್ನು ನಿರ್ಮಿಸಿ ಅಲ್ಲಿ ವಾಸವಿದ್ದರು. ಈ ಪೈಕಿ ಶಿಜು ಎಂಬಾತ ಕಳೆದ ಹಲವು ಸಮಯದಿಂದ ಪರಿಸರದ ಬಾಲಕಿಯೊಬ್ಬಳಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಹಲವು ಸಲ ಎಚ್ಚರಿಸಿದರೂ ತನ್ನ ಕೃತ್ಯ ಮುಂದುವರಿಸಿದ್ದರಿಂದ ಮನೆಯವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನ ವಿರುದ್ಧ ಫೋಕ್ಸೋ ಪ್ರಕರಣದಡಿ ಕೇಸು ದಾಖಲಾಗಿದೆ. ಘಟನೆಯಿಂದ ಕೋಪಗೊಂಡ ಊರ ಕೆಲವರು ಆತ ವಾಸವಿದ್ದ ಮನೆಯನ್ನು ಹಾಳುಗೆಡವಿದ್ದಾರೆ. ಜಾಗದಲ್ಲಿದ್ದ ಬಾಳೆ ಕೃಷಿಯನ್ನೂ ಕಡಿದು ಹಾಕಿದ್ದಾರೆ.