ಉಡುಪಿ : ಯೇಸುಕ್ರಿಸ್ತರ ಕೊನೆಯ ಭೋಜನದ ಸ್ಮರಣೆ
ಉಡುಪಿ, ಮಾ.24: ಯೇಸುಕ್ರಿಸ್ತ ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೈಸ್ತ ಧರ್ಮ ಸಭೆಯ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥರ್ಸ್ಡೆ)ವನ್ನು ಉಡುಪಿ ಜಿಲ್ಲಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಉಡುಪಿ ಧರ್ಮಪ್ರಾಂತದ ಪ್ರಧಾನ ಧಾರ್ಮಿಕ ಕಾರ್ಯಕ್ರಮ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್ನಲ್ಲಿ ಜರಗಿತು. ಈ ವೇಳೆ ಧರ್ಮಾಧ್ಯಕ್ಷರು 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವುದರ ಮೂಲಕ ಯೇಸುಸ್ವಾಮಿಯ ದೀನತೆಯ ಹಾಗೂ ಪರಸ್ಪರ ಪ್ರೀತಿಯ ಸಂದೇಶವನ್ನು ನೀಡಿ ದರು.
ಉಡುಪಿ ನಗರದ ಶೋಕಮಾತಾ ಇಗರ್ಜಿಯಲ್ಲಿ ನಡೆದ ಕಾರ್ಯಕ್ರಮದ ನೇತೃತ್ವವನ್ನು ಧರ್ಮಗುರು ವಂ.ಫ್ರೆಡ್ ಮಸ್ಕರೇನ್ಹಸ್ ವಹಿಸಿದ್ದರು. ಉಡುಪಿ ಪೆರಂಪಳ್ಳಿಯ ಅವರ್ ಲೇಡಿ ಆಫ್ ಫಾತಿಮಾ ಚರ್ಚ್ನಲ್ಲಿ ಫಾದರ್ ರೋಮಿಯೋ ಲೂಯಿಸ್ ಪಾದಪೂಜೆ ನೆರವೇರಿಸಿದರು.
ಪೋಪ್ ಜಗದ್ಗುರುಗಳ ಆದೇಶವನ್ನು ಧರ್ಮಪ್ರಾಂತದ ಎಲ್ಲಾ ಚರ್ಚ್ಗಳ ಧರ್ಮಗುರುಗಳಿಗೆ ತಲುಪಿಸಲಾಗಿದೆ. ಇದರಲ್ಲಿ ಮಹಿಳೆಯರು, ರೋಗಿಗಳು, ವಯಸ್ಕರು, ಯುವಕರಿಗೆ ಹಾಗೂ ಧರ್ಮಭಗಿನಿಯರಿಗೆ ಪ್ರಾತಿನಿಧ್ಯವನ್ನು ಕಲ್ಪಿಸಲು ಸೂಚಿಸಲಾಗಿದೆ. ಈ ಕುರಿತು ಯಾವುದೇ ರೀತಿಯ ನಿರ್ಧಾರವನ್ನು ಕೈಗೊಳ್ಳಲು ಆಯಾ ಚರ್ಚಿನ ಧರ್ಮಗುರುಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ.
-ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಧರ್ಮಾಧ್ಯಕ್ಷರು ಉಡುಪಿ