ಬೆಳ್ತಂಗಡಿ : ಜನರಿಂದ ನಿರೀಕ್ಷಿತ ಸ್ಪಂದನೆ ದೊರಕುತ್ತಿಲ್ಲ - ಎಂ.ಜಾನಕಿ ಬ್ರಹ್ಮಾವರ
ಬೆಳ್ತಂಗಡಿ: ಕರ್ನಾಟಕ ತುಳು ಸಾಹಿತ್ಯಅಕಾಡೆಮಿ ತುಳು ಭಾಷೆ ಸಂಸ್ಕೃತಿಗಾಗಿ ಸರಿಯಾದ ದಾರಿಯಲ್ಲಿ, ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದೆ. ಆದರೆ ಜನರಿಂದ ನಿರೀಕ್ಷಿತ ಸ್ಪಂದನೆ ದೊರಕುತ್ತಿಲ್ಲ ಎಂದು ಅಕಾಡೆಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ವಿಷಾದಿಸಿದರು.
ಅವರು ಶುಕ್ರವಾರ ಉಜಿರೆ ಶ್ರೀಶಾರದಾ ಮಂಟಪದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ತುಳುವೆರೆ ಚಾವಡಿ ಉಜಿರೆಇದರ ಸಹಕಾರದೊಂದಿಗೆ ನಡೆದ ಬೋಳ್ತೇರ್ (ಬೆಳ್ತಂಗಡಿ) ತುಳುಮಿನದನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಳು ಭಾಷೆ, ಸಾಹಿತ್ಯದ ಏಳಿಗೆಗಾಗಿ ನಾವು ಜನರ ನಡುವೆ ಹೋದರೂ ನಿರೀಕ್ಷಿತ ಕೆಲಸಗಳು ನಡೆಯುತ್ತಿಲ್ಲ ಎಂದ ಅವರು ವಿದ್ಯಾರ್ಥಿಗಳಲ್ಲಿ ತುಳುವಿನ ಬಗ್ಗೆ ಅರಿವು ಮೂಡಿಸಬೇಕಾಗಿದೆಎಂದರು.
ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸರೈ. ಬಿ. ಮಾತನಾಡಿ ತಾಲೂಕು ವ್ಯಾಪ್ತಿಯಲ್ಲಿ ತುಳು ಸಾಹಿತಿ, ಕವಿ, ಲೇಖಕ, ವಿದ್ವಾಂಸ ಮತ್ತಿತರರನ್ನು ಸಂಘಟಿಸುವ ಕೆಲಸ ಅಕಾಡೆಮಿ ಮಾಡುತ್ತಿದೆ. ಮಿನದನ, ತುಳು ಕಾರ್ಯಗಾರ, ಚಾವಡಿ ಚರ್ಚೆಗಳ ಮೂಲಕ ತುಳುವಿನ ಅರಿವನ್ನು ಮೂಡಿಸುವ ಪ್ರಯತ್ನ ನಡೆಯುತ್ತದೆ. ಕಳೆದ ಬಾರಿ18 ಮಂದಿ ಹಾಗೂ ಈ ಬಾರಿ 25 ಮಂದಿ ತುಳು ಪರೀಕ್ಷೆ ಬರೆದಿದ್ದಾರೆ. ಇದುವರೆಗೆ ಸುಮಾರು 225 ಮಂದಿ ತುಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ತುಳು ಸರ್ಟಿಫಿಕೇಟ್ ಕೋರ್ಸ್ ಕೂಡ ನಡೆಸಲಾಗುತ್ತಿದೆ. ತುಳು ಭಾಷಿಕರಲ್ಲದವರೂ ತುಳು ಉಳಿವಿಗಾಗಿ ಪ್ರಯತ್ನಿಸುತ್ತಿರುವುದನ್ನು ಪ್ರಶಂಸಿದ ಅವರು ಅಕಾಡೆಮಿಯ ಬಗ್ಗೆ ಭಾವಜೀವಿಗಳಾಗಿ ಮಾತನಾಡುವವರು ಪ್ರಾಯೋಗಿಕತೆಯ ಬಗ್ಗೆ ಹೆಚ್ಚು ಚಿಂತಿಸಬೇಕಾದ ಅಗತ್ಯವಿರುವುದನ್ನು ವಿವರಿಸಿದರು.
ಮಿನದನವನ್ನು ಉದ್ಘಾಟಿಸಿ ಮಾತನಾಡಿದ ಉಜಿರೆ ಶ್ರೀ ಜನಾರ್ಧನ ಸ್ವಾಮಿದೇವಸ್ಥಾನದ ಆಡಳ್ತೆ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅವರು ಇಂತಹ ಕಾರ್ಯಕ್ರಮಗಳ ಮೂಲಕ ತುಳು ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಾಧ್ಯ. ತುಳು ಸಂಪರ್ಕ ಭಾಷೆ ಮಾತ್ರ ಆಗಿರದೆಅದು ವ್ಯಕ್ತಿತ್ವ ವಿಕಸನ, ಸಾಹಿತ್ಯಕ ಬೆಳವಣಿಗೆಗೆ ಹೇಗೆ ಪೂರಕ ಎಂಬುದನ್ನು ಚಿಂತಿಸಬೇಕಾಗಿದೆ ಎಂದರು. ವೇದಿಕೆಯಲ್ಲಿ ಉಜಿರೆಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ
ಉಜಿರೆ ಅಧ್ಯಕ್ಷಡಾ ಎಂ.ಎಂ.ದಯಾಕರ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯಡಾ ದಿವಾ ಕೊಕ್ಕಡ ಪ್ರಸ್ತಾವಿಸಿದರು. ಮಿನದನದ ಸಂಚಾಲಕ ಡಾ ಎಂ.ಪಿ.ಶ್ರೀನಾಥ್ ವಂದಿಸಿದರು. ಬೆಳ್ತಂಗಡಿ ತುಳುನಾಡ ಒಕ್ಕೂಟದ ಅಧ್ಯಕ್ಷ ಶೈಲೇಶ್ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಇಂದು ತುಳುವಿನೊಂದಿಗೆ ಆಂಗ್ಲ ಭಾಷೆ ಸೇರಿ ನಪುಂಸಕ ಭಾಷೆಯೊಂದು ಸೃಷ್ಟಿಯಾಗುತ್ತಿದೆ. ಹೀಗಾಗಿ ನಾವು ತುಳುವಿನ ಬಗ್ಗೆ ಬದ್ಧತೆ ಪ್ರದರ್ಶಿಸಬೇಕಾಗಿದೆ- ಯು.ವಿ.ಪಡ್ವೆಟ್ನಾಯ
ಅಕಾಡೆಮಿಗೆ ಬರುವ ರೂ.60 ಲಕ್ಷ ಅನುದಾನದಲ್ಲಿ ರೂ. 20 ಲಕ್ಷವನ್ನು ತುಳುವಿಗಾಗಿ ಕಾರ್ಯಕ್ರಮವನ್ನು ಮಾಡುವ ಸಂಘ-ಸಂಸ್ಥೆಗಳಿಗೆ ಹಂಚುತ್ತೇವೆ. ಆದರೆ ಅಕಾಡೆಮಿ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮಗಳಿಗೆ ಬರಲು ಅನುದಾನ ಪಡೆದುಕೊಂಡ ಸಂಘ-ಸಂಸ್ಥೆಯವರಿಗೆ ಪುರುಸೋತ್ತೇ ಇರದಿರುವುದು ಬೇಸರತರುವ ವಿಚಾರವಾಗಿದೆ.