ಮಂಗಳೂರು : ಫ್ಯಾಶಿಸಂ ಹಿಮ್ಮೆಟ್ಟಿಸಲು ಸ್ವತಂತ್ರ ಆಲೋಚನಾ ಶಕ್ತಿ ಬೆಳಿಸಿಕೊಳ್ಳಿ: ನ್ಯಾ. ಕೋಸ್ಲೆ
ಮಂಗಳೂರು, ಮಾ.25: ಸಂವಿಧಾನದ ಮುಖ್ಯ ಉದ್ದೇಶವೇ ಶೋಷಣೆ ಮುಕ್ತ ಸಮಾಜವಾಗಿದ್ದು, ಅದಕ್ಕಾಗಿ ಫ್ಯಾಶಿಸಂ ಶಕ್ತಿಯನ್ನು ಹಿಮ್ಮೆಟ್ಟಿಸುವ ಅಗತ್ಯವಿದೆ. ಅದು ಸ್ವತಂತ್ರ ಆಲೋಚನಾ ಶಕ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಸಾಧ್ಯ ಎಂದು ನಿವೃತ್ತ ನ್ಯಾಯಾಧೀಶ ಹಾಗೂ ಲೋಕ ಶಾಸಕ ಆಂದೋಲನದ ಅಧ್ಯಕ್ಷ ಜಿ.ಬಿ. ಕೋಸ್ಲೆ ಪಾಟೀಲ್ ಅಭಿಪ್ರಾಯಿಸಿದ್ದಾರೆ. ಅಸಹಿಷ್ಣುತೆ, ಭೀತಿ ವಾತಾವರಣ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಱಫ್ಯಾಶಿಸಂ ಧಿಕ್ಕರಿಸಿ ಪ್ರಜಾಪ್ರಭುತ್ವ ಉಳಿಸಿರಿೞಎಂಬ ಪ್ರಚಾರಾಂದೋಲನದ ಅಂಗವಾಗಿ ಇಂದು ನಗರದ ಪುರಭವನದಲ್ಲಿ ಆಯೋಜಿಸಲಾದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಭಿವೃದ್ಧಿಯ ನೈಜ ವ್ಯಾಖ್ಯಾನವೇ ಸ್ವತಂತ್ರ ವಿಚಾರಧಾರೆಯ ನಾಗರಿಕತೆ ರಚಿಸುವುದಾಗಿದೆ.
ಆರೆಸ್ಸೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕೆಂದರೆ ಕೇವಲ ಚಪ್ಪಾಳೆ, ಘೋಷಣೆ ಕೂಗುವುದರಿಂದ ಸಾಧ್ಯವಿಲ್ಲ. ಬದಲಾಗಿ ನಾವು ನಮ್ಮಾಳಗಿನ ಒಡಕನ್ನು ಬದಿಗಿಟ್ಟು ಒಗ್ಗೂಡಬೇಕು ಎಂದವರು ಕರೆ ನೀಡಿದರು. ದೇಶದಲ್ಲಿ 20ರಿಂದ 25 ಕೋಟಿಯಷ್ಟು ಮಂದಿ ಮುಸ್ಲಿಮರಿದ್ದಾರೆ. ಕ್ರೈಸ್ತ ಸೇರಿದಂತೆ ಇತರ ಸಮುದಾಯದವರೂ ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಕೇವಲ ಒಂದು ಕೋಟಿಯಷ್ಟಿರುವ ಆರ್ಯ ಬ್ರಾಹ್ಮಣ ಸಮುದಾಯವು ಇಡೀ ದೇಶವನ್ನು ತನ್ನ ಕಪಿಮುಷ್ಟಿಯಲ್ಲಿರಿಸಿಕೊಂಡಂತೆ ವರ್ತಿಸುತ್ತಿದೆ. ಆ ಸಮುದಾಯದವರು ಸರದಾರ್ ವಲ್ಲಭಬಾಯಿ ಪಟೇಲ್, ಮಹಾತ್ಮಾಗಾಂಧಿ, ಭಗತ್ಸಿಂಗ್, ವಿವೇಕಾನಂದರನ್ನು ಬಿಟ್ಟು ಗೋಳ್ವಾಲ್ಕರ್, ಸಾರ್ವಕರ್ರನ್ನು ಮಾತ್ರವೇ ಬೆಂಬಲಿಸುತ್ತಾರೆ. ಧರ್ಮವೆಂಬುದು ಚರ್ಚ್, ಮಸೀದಿ, ಮಂದಿರಗಳಿಗೆ ಮಾತ್ರವೇ ಸೀಮಿತವಾಗಿರಬೇಕು. ಆದರೆ ಅದರಿಂದ ಹೊರಬಂದಿರುವ ಪರಿಣಾಮವನ್ನು ನಾವಿಂದು ಎದುರಿಸುವಂತಾಗಿದೆ. ಈ ನಡುವೆ ನಾವು ನಮ್ಮ ಸ್ವತಂತ್ರ ಆಲೋಚನಾ ಶಕ್ತಿಯ ಬಗ್ಗೆ ಗಮನ ಹರಿಸುತ್ತಿಲ್ಲ.
ನಾವು ವಿವೇಕವಾದ, ವಿಜ್ಞಾನವಾದವನ್ನು ಉಪಯೋಗಿಸುವವರೆಗೆ ಸಂವಿಧಾನದ ಮೂಲ ಆಶಯವಾದ ಶೋಷಣೆ ಮುಕ್ತ ಸಮಾಜ ನಿರ್ಮಾಣ ಅಸಾಧ್ಯ ಎಂದವರು ವ್ಯಾಖ್ಯಾನಿಸಿದರು. ಪ್ರಧಾನಿ ಮೋದಿಯವರನ್ನು ತೀವ್ರ ತರಾಟೆಗೈದ ಅವರು, ಅಡುಗೆ ಅನಿಲ ಸಬ್ಸಿಡಿ ಬಿಡಿ ಎಂದು ಹೇಳಲು ಪ್ರಧಾನಿ ಕೋಟಿಗಟ್ಟಲೆ ರೂ.ಗಳನ್ನು ಜಾಹೀರಾತಿಗಾಗಿ ಪೋಲು ಮಾಡುತ್ತಾರೆ. ಈ ಬಗ್ಗೆ ನಾವು ಆಲೋಚಿಸಬೇಕಾಗಿದೆ ಎಂದು ಹೇಳಿದರು. ಮುಖ್ಯ ಉಪನ್ಯಾಸ ನೀಡಿದ ಉಡುಪಿಯ ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಜಿ. ರಾಜಶೇಖರ್, ಒತ್ತಾಯದ ದೇಶಪ್ರೇಮ ಜನತೆಯ ಮೇಲೆ ಫ್ಯಾಶಿಸಂ ಶಕ್ತಿಯನ್ನು ಹೇರುವ ಸ್ಪಷ್ಟ ಮುನ್ಸೂಚನೆ ಎಂದು ಹೇಳಿದರು.
ಕನ್ಹಯ್ಯಗೆ ಪ್ರಪಂಚದ ಯಾವ ಕೋರ್ಟ್ ಶಿಕ್ಷೆ ನೀಡದು: ನ್ಯಾ.ಕೋಸ್ಲೆ
ಅನ್ಯಾಯ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಜೆಎನ್ಯುನ ವಿದ್ಯಾರ್ಥಿ ಕನ್ಹಯ್ಯಾ ದೇಶದ್ರೋಹಿಯಲ್ಲ. ಪ್ರಪಂಚದ ಯಾವ ನ್ಯಾಯಾಲಯವೂ ಆತನಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಾಧೀಶರೂ ಆಗಿರುವ ಬಿ.ಜಿ. ಕೋಸ್ಲೆ ಪಾಟೀಲ್ ಅಭಿಪ್ರಾಯಿಸಿದರು.