ಕೊಲ್ಲೂರು ದೇವಳದ ಹಗರಣ ಸಿಐಡಿ ತನಿಖೆಗೆ ಒತ್ತಾಯ: ಸಚಿವ ಸೊರಕೆ
ಪಡುಬಿದ್ರೆ, ಮಾ.25: ಉಡುಪಿ ಜಿಲ್ಲೆಯಲ್ಲಿ ವಿವಿಧ ದೇವಳಗಳ ಸುಮಾರು 500 ಕೋಟಿ ರೂ.ಗಳನ್ನು ಆಡಳಿತಾಧಿಕಾರಿಗಳು ತಮಗೆ ಬೇಕಾದ ಬ್ಯಾಂಕ್ಗಳಲ್ಲಿ ಡೆಪಾಸಿಟ್ ಇಡುತ್ತಿದ್ದಾರೆ ಎಂದು ಈ ಹಿಂದಿನ ಮುಜರಾಯಿ ಇಲಾಖೆಯ ಸಚಿವರು ಹೇಳಿದ್ದರು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಬೆಳಪುವಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಕೊಲ್ಲೂರು ದೇವಳದಲ್ಲಿ ಈ ಹಿಂದಿನ ಆಡಳಿತಾವಧಿಯಲ್ಲಿ ಭಕ್ತರು ನೀಡುವ ಹಣದ ದುರುಪಯೋಗವಾಗಿರುವ ಬಗ್ಗೆ ಸಿಒಡಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಯೊಂದಿಗೆ ಒತ್ತಾಯಿಸಿದ್ದೇನೆ.
ಇದೀಗ ಕೊಲ್ಲೂರು ದೇವಳದಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಭಕ್ತರು ದೇವಳಕ್ಕೆ ಹರಕೆಯ ರೂಪದಲ್ಲಿ ನೀಡುವ ಚಿನ್ನ ದುರುಪಯೋಗವಾಗಿದೆ. ಅಲ್ಲದೆ ನಕಲಿ ರಶೀದಿ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆುಲ್ಲಿ ಸಿಐಡಿ ತನಿಖೆ ಒತ್ತಾಯಿಸಿರುವುದಾಗಿ ಅವರು ಹೇಳಿದರು. ಆಡಳಿತಾಧಿಕಾರಿಗಳ ನೇಮಕ ವಿವಾದ: ದೇವಸ್ಥಾನಗಳ ಆಡಳಿತಾಧಿಕಾರಿಗಳ ತೆರವಾದ ಸ್ಥಾನಕ್ಕೆ ಧಾರ್ಮಿಕ ಪರಿಷತ್ ನೇಮಕಾತಿ ಮಾಡಬೇಕಿತ್ತು. ಆದರೆ ಇದೀಗ ನ್ಯಾಯಾಲ ಯದಲ್ಲಿ ತಡೆಯಾಜ್ಞೆಯಿದ್ದು, ಆದಷ್ಟು ಬೇಗ ಈ ಪ್ರಕರಣ ತೆರವಾಗಲಿದೆ.
ಸುಪ್ರೀಂಕೋರ್ಟ್ಗೂ ಅಫಿದವಿತ್ ಸಲ್ಲಿಸ ಲಾಗುವುದು. ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನೇಮಕಾತಿ ಮಾಡಲು ಮುಜರಾಯಿ ಇಲಾಖೆಯ ಸಚಿವರ ಜೊತೆಯಲ್ಲಿ ಸಂಪುಟ ಉಪಸಮಿತಿ ರಚಿಸಿ ಅದರ ಮೂಲಕ ತೀರ್ಮಾನ ಮಾಡಿಕೊಳ್ಳಲಿದ್ದಾರೆ ಎಂದು ಸೊರಕೆ ಹೇಳಿದರು. ಕೆಲಸ ನಿಲ್ಲಿಸಲು ಸೂಚನೆ: ಪಾದೂರಿನ ಕಚ್ಚಾತೈಲ ಘಟಕಕ್ಕೆ ನಂದಿಕೂರಿನಿಂದ ಹೈಟೆನ್ಶನ್ ವಿದ್ಯುತ್ ಲೈನ್ ಅಳವಡಿಸುವ ವೇಳೆ ಕೆಲವೊಂದು ಕೃಷಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ತಕ್ಷಣದಿಂದ ಕೆಲಸ ನಿಲ್ಲಿಸಲು ಸೂಚನೆ ನೀಡಲಾಗಿದೆ. ಕೃಷಿಕರಿಗೆ ತಕ್ಷಣ ಸೂಕ್ತ ಪರಿಹಾರ ದೊರಕಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೋಟಿಸ್ ನೀಡಿ ಕಾನೂನುಬದ್ಧವಾಗಿ ಕೆಲಸ ನಡೆಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಯಾವುದೇ ಕಾರಣಕ್ಕೂ ಕೃಷಿಕರಿಗೆ ತೊಂದರೆ ಉಂಟು ಮಾಡಲು ಬಿಡುವುದಿಲ್ಲ ಎಂದು ವಿನಯಕುಮಾರ್ ಸೊರಕೆ ಹೇಳಿದರು.