ಸುಳ್ಯ: ಪ್ರಾಕೃತಿಕ ವಿಪತ್ತು ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ
ಸುಳ್ಯ: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ಕಾಲೇಜು ಆವರಣದಲ್ಲಿ ಆರಂಭಗೊಂಡಿದೆ. ಸುಳ್ಯ ಎಸ್ಐ ಚಂದ್ರಶೇಖರ ಕಾರ್ಯಾಗಾರವನ್ನು ಉದ್ಘಾಟಿಸಿದರು. ಪ್ರಾಕೃತಿಕ ವಿಕೋಪ ಸಂದರ್ಭ ಸೇನೆ, ಗಡಿ ಭದ್ರತಾ ಪಡೆ, ಪೊಲೀಸರು, ಗೃಹರಕ್ಷಕರು, ಎನ್ಸಿಸಿಯವರು ಸೇರಿದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗುತ್ತವೆ. ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಸಾರ್ವಜನಿಕರೂ ಕೈಜೋಡಿಸಬೇಕೆಂಬ ಉದ್ದೇಶದಿಂದ ಈ ಕುರಿತು 2005ರಲ್ಲಿ ಕಾಯ್ದೆಯನ್ನು ತರಲಾಗಿದೆ. ದೇಶಕ್ಕೆ ನಮ್ಮ ಕಾಣಿಕೆ ಏನು ಎಂಬುದು ಮುಖ್ಯವಾಗಬೇಕು. ಅದಕ್ಕಾಗಿ ತರಬೇತಿ ಪಡೆಯುವುದು ಅತೀ ಅಗತ್ಯ ಎಂದವರು ಹೇಳಿದರು.
ಪ್ರಾಂಶುಪಾಲ ಮೇಜರ್ ಗಿರಿಧರ ಗೌಡ ಮಾತನಾಡಿ, ಹಲವು ವಿಕೋಪಗಳ ಪ್ರಾಕೃತಿಕವಾಗಿ ನಡೆದರೆ ಇನ್ನೂ ಕೆಲವು ಮಾನವ ನಿರ್ಮಿತ. ಶೇ.90ರಷ್ಟು ರಸ್ತೆ ಅಪಘಾತಗಳು ನಿರ್ಲಕ್ಷ್ಯದಿಂದ ಸಂಭವಿಸುತ್ತವೆ. ಸೆಲ್ಫಿ ತೆಗೆಯುವ ಹೊಸ ಚಾಳಿ ಆರಂಭಗೊಂಡಿದ್ದು, ಈ ಸಂದರ್ಭ ಹಲವರು ಪ್ರಾಣ ತೆತ್ತಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿಪತ್ತು ನಿರ್ವಹಣೆ ಕುರಿತು ಫೌಂಡೇಶನ್ ಕೋರ್ಸ್ ಆರಂಭವಾಗಲಿದೆ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನಿನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಸಂತೋಷ್ ಪೀಟರ್ ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ಸಂದರ್ಭ ಸಾರ್ವಜನಿಕರು ದೂರುವುದನ್ನು ಬಿಟ್ಟು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಪ್ರಕೃತಿ ವಿಕೋಪಗಳಾದಾಗ ಯಾವ ರೀತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವುದರೊಂದಿಗೆ ಇತರರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿ ತರಬೇತಿ ನೀಡುವುದರಿಂದ ಸಮಾಜವನ್ನು ರಕ್ಷಿಸಲು ಸಾಧ್ಯ. ಹಾನಿಯ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು.
ತರಬೇತುದಾರರಾದ ಮಂಗಳೂರಿನ ನಿತಿನ್, ಪವನ್ ಶೆಟ್ಟಿ, ಸಮತಾ, ರೆಡ್ಕ್ರಾಸ್ ಯುವ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ, ವಿದ್ಯಾರ್ಥಿ ನಾಯಕರಾದ ಯಶಸ್ವಿ, ಶ್ರೀವತ್ಸ ವೇದಿಕೆಯಲ್ಲಿದ್ದರು. ಸಿಂಧೂರ ಕಾರ್ಯಕ್ರಮ ನಿರೂಪಿಸಿದರು.
ಸ್ಥಳದಲ್ಲೇ ಅಡುಗೆ ತಯಾರಿ,
ಸುಳ್ಯ ನೆಹರೂ ಸ್ಮಾರಕ ಕಾಲೇಜಿನಲ್ಲಿ ಯುವ ರೆಡ್ಕ್ರಾಸ್ ಘಟಕದ ವತಿಯಿಂದ ನಡೆದ ‘ಜಂಗಲ್ ಸರ್ವೈವಲ್ ಮತ್ತು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಟ್ರೈನಿಂಗ್’ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನಡೆಯಿತು. ಕಾಡಿನಲ್ಲಿ ಆಕಸ್ಮಿಕವಾಗಿ ಸಿಕ್ಕಿಬಿದ್ದಾಗ ಅಲ್ಲಿ ದಿನ ಕಳೆಯಲು ಆಹಾರ ತಯಾರಿ, ದಿಕ್ಕು ಗಮನಿಸುವುದು, ಕಾಡಿನಲ್ಲಿ ವಿಪತ್ತು ಎದುರಾದಾಗ ರಕ್ಷಣೆ ಪಡೆದುಕೊಳ್ಳುವುದು, ಕಾಡುಪ್ರಾಣಿಗಳಿಂದ, ಹಾವುಗಳಿಂದ ರಕ್ಷಿಸಿಕೊಳ್ಳುವುದು, ಟೆಂಟ್ ತಯಾರಿ, ಅನಿವಾರ್ಯ ಸಂದರ್ಭದಲ್ಲಿ ಮೃತದೇಹಗಳನ್ನು ಸ್ಟ್ರಚರ್ ಮೂಲಕ ಎತ್ತಿ ತರುವುದು, ಬಿದಿರು, ಅಂಗಿ ಮತ್ತಿತರ ಸಾಧನೆಗಳ ಮೂಲಕ ಸ್ಟ್ರಚರ್ ನಿರ್ಮಾಣ ಮೊದಲಾದ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ರೆಡ್ಕ್ರಾಸ್ನ ಯೂತ್ವಿಂಗ್ ಮಾಜಿ ಕನ್ವಿನರ್ ಸಂತೋಷ್ ಪೀಟರ್ ಡಿ’ಸೋಜಾ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.