ಪುತ್ತೂರು ಜಾತ್ರೆ ಆಮಂತ್ರಣ ಪತ್ರಿಕೆ ವಿವಾದ : ಹಿಂದೂಗಳ ಹಕ್ಕಿನ ಅತಿಕ್ರಮಣ -ಲೋಲಾಕ್ಷ
ಮಂಗಳೂರು,ಮಾ.27:ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ. ಬಿ.ಇಬ್ರಾಹೀಂ ಅವರ ಹೆಸರನ್ನು ಹಾಕಿರುವುದು ಸಂವಿಧಾನ ವಿಧಿಯಂತೆ ಹಿಂದೂಗಳ ಹಕ್ಕಿನ ಅತಿಕ್ರಮಣವಾಗಿದ್ದು ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಂದಾಯ ಇಲಾಖೆಯ ಡೆಪ್ಯುಟಿ ಕಮೀಷನರ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಡೆಪ್ಯುಟಿ ಕಮೀಷನರ್ ಬೇರೆ ಬೇರೆ ವ್ಯವಸ್ಥೆ. ಧಾರ್ಮಿಕ ದತ್ತಿ ಇಲಾಖೆಯ ಡೆಪ್ಯುಟಿ ಕಮೀಷನರ್ ಎಂಬುದು ಗ್ರೂಪ್ ಎ ಹಿರಿಯ ಶ್ರೇಣಿಯ ಅಧಿüಕಾರಿಯಾಗಿರುತ್ತಾರೆ. ಕಾಯ್ದೆಯ ಪ್ರಕಾರ ಅವರಿಗೆ 1 ಕ್ಕಿಂತ ಹೆಚ್ಚು ಜಿಲ್ಲೆಯ ಮುಜರಾಯಿ ದೇವಸ್ಥಾನದ ಅಧಿಕಾರವಿರುತ್ತದೆ. ಆದರೆ ಕಂದಾಯ ಡೆಪ್ಯುಟಿ ಕಮೀಷನರ್ ಆಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ತಮ್ಮನ್ನು ತಾವು ಧಾರ್ಮಿಕ ದತ್ತಿ ಇಲಾಖೆಯ ಡೆಪ್ಯುಟಿ ಕಮೀಷನರ್ ಎಂದು ಪರಿಭಾವಿಸಿಕೊಂಡಿದ್ದಾರೆ ಎಂದು ಹೇಳಿದರು. ಅಲ್ಲದೆ ಪತ್ರಿಕಾ ಹೇಳಿಕೆಯಲ್ಲಿ ತಾವು ಜಿಲ್ಲೆಯ ಮುಖ್ಯಸ್ಥ ಎಂದು ಹೇಳಿದ್ದಾರೆ. ಜಿಲ್ಲೆಯ ಮುಖ್ಯಸ್ಥ ಎನ್ನುವುದು ಚುನಾಯಿತ ಜನಪ್ರತಿನಿಧಿಯಾಗಿ ಆಯ್ಕೆಯಾದ ಜಿಲ್ಲಾ ಉಸ್ತುವಾರಿ ಸಚಿವರು. ಈ ಹೇಳಿಕೆಯ ಮೂಲಕ ಅವರು ಪ್ರಜಾಸತ್ತೆಯನ್ನು ಅಣಕ ಮಾಡಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ನೀಡಿರುವ ಹೇಳಿಕೆ ಕಾನೂನಿಗೆ ವ್ಯತಿರಿಕ್ಷವಾಗಿದೆ. ಶಿಷ್ಟಾಚಾರದ ಹೆಸರಿನಲ್ಲಿ ಅತಿಕ್ರಮಣ ನಡೆದರೆ ಮುಂದೆ ದಲಿತ, ಮಹಿಳೆಯರನ್ನು ಹೊರಗಿಡುವ ಕೆಲಸವು ಆಗಬಹುದು. ಶಿಷ್ಠಾಚಾರದ ಹೆಸರಿನಲ್ಲಿ ಅಪಾಯಕಾರಿ ಪ್ರವೃತ್ತಿ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ದ.ಕ. ಜಿಲ್ಲಾ ದಲಿತ ಮಹಾಸಭಾ ಜಿಲ್ಲಾಧ್ಯಕ್ಷ ರಾಜಾ ಪಲ್ಲಮಜಲು ಉಪಸ್ಥಿತರಿದ್ದರು.