ಸುಳ್ಯ: ಹೆಚ್ಚುತ್ತಿರುವ ಉಷ್ಣಾಂಶಕ್ಕೆ ಜನತೆ ತತ್ತರ, ಕುಡಿಯುವ ನೀರಿಗೂ ಹಾಹಾಕಾರ

Update: 2016-03-27 12:45 GMT

ಏರುತ್ತಿದೆ ಬಿಸಿಲಿನ ಝಳ.. ಆರುತ್ತಿದೆ ನೀರಿನ ಹರಿವು..

ಸುಳ್ಯ: ಬಿಸಿಲಿನ ಧಗೆ ತೀವ್ರವಾಗುತ್ತಿದ್ದು, ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಸುಳ್ಯ ತಾಲೂಕಿನ ಹಲವೆಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ತೋಟಕ್ಕೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಹವಾಮಾನ ವೈಪರೀತ್ಯದ ಪ್ರಮಾಣ ಏರುತ್ತಲೇ ಇದೆ. ಪರಿಸರ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗುವುದರೊಂದಿಗೆ ಬಿಸಿಲಿನ ಕಾವೂ ಹೆಚ್ಚುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಿಂದ ಜನವರಿವರೆಗೆ ಮಾತ್ರ ಚಳಿ ಇರುತ್ತಿದ್ದು, ಈ ಬಾರಿ ಈ ಬಾರಿ ಫೆಬ್ರವರಿಯಲ್ಲಿ ಚಳಿ ಕಾಣಿಸಿಕೊಂಡಿತ್ತು. ಫೆಬ್ರವರಿ ಕೊನೆಯ ವೇಳೆಗೆ ಸೆಖೆ ಆರಂಭಗೊಂಡು ಇದೀಗ ಮೋಡದ ವಾತವಾವರಣ ಇದ್ದರೂ ಗರಿಷ್ಠ ಉಷ್ಣಾಂಶವಿದೆ. ಕರಾವಳಿ ಬಹುತೇಕ ಕಡೆ ಸಾಮಾನ್ಯವಾಗಿ ಗರಿಷ್ಠ 32 ಡಿಗ್ರಿ ಉಷ್ಣಾಂಶ ದಾಖಲಾಗುತ್ತದೆ. ಆದರೆ ಈ ಬಾರಿ 35ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಸುಳ್ಯದ ಜೀವನದಿ ಪಯಸ್ವಿನಿಯಲ್ಲಿಯೂ ನೀರಿನ ಹರಿವು ಕಡಿಮೆಯಗಿದೆ. ಇದರಿಂದ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ.

ನೀರಿಗೆ ತ್ಯಾಜ್ಯ:

ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆಯೂ ತ್ಯಾಜ್ಯವನ್ನು ನದಿಗೆ ಎಸೆಯುವ ಪ್ರವೃತ್ತಿ ಮುಂದುವರಿದಿದೆ. ಸುಳ್ಯದ ಮೊಗರ್ಪಣೆ ಸೇತುವೆ ಮೇಲಿನಿಂದ ಹೊಳೆಗೆ ಕೊಳೆತ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ನದಿಯಲ್ಲಿರುವ ನೀರಿನ ಪ್ರಮಾಣವೂ ಕಡಿಮೆಯಾಗಿದ್ದು, ಅದೂ ಕಲುಷಿತಗೊಂಡಿದೆ. ಕೊಳೆ ತ್ಯಾಜ್ಯಗಳೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನದಿಗೆ ಎಸೆಯುವುದರಿಂದ ಪರಿಸರವಿಡೀ ದುರ್ನಾತ ಬೀರುತ್ತಿದೆ. ಸ್ಥಳೀಯ ಅಂಗಡಿಯವರು ತ್ಯಾಜ್ಯವನ್ನು ಹೊಳೆಗೆ ಬಿಸಾಡುತ್ತಿಲ್ಲ. ಹೊರಗಿನಿಂದ ಬಂದವರೇ ಇಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಸ್ಥರು.

ತೋಟಕ್ಕೆ ನೀರಿಲ್ಲ:

 ಅಡಿಕೆ ತೋಟಗಳಿಗೆ ನೀರಿಲ್ಲದೆ ಒಣಗಲು ಆರಂಭವಾಗಿವೆ. ದಿನಕ್ಕೆ 2 ಗಂಟೆ ನೀರು ಹಾಯಿಸುತ್ತಿದ್ದ ಕೃಷಿಕರಿಗೆ ಈಗ ಅರ್ಧ ಗಂಟೆ ನೀರು ಬಿಡಲೂ ಸಿಗುತ್ತಿಲ್ಲ. ಅದರ ಮಧ್ಯೆ ಇದ್ದ ನೀರನ್ನು ಹಾಯಿಸಲೂ ವಿದ್ಯುತ್ ಸಮಸ್ಯೆ. ಮಾರ್ಚ್ ಕೊನೆಯಾದರೂ ಒಂದೂ ಬೇಸಿಗೆ ಮಳೆ ಬಂದಿಲ್ಲ. ಕೇವಲ ಮೋಡ ಮಾತ್ರ ಬಂದು ಇದ್ದ ನೀರನ್ನೆಲ್ಲಾ ಆವಿ ಮಾಡುತ್ತಿದೆ. ಕನಿಷ್ಠ 2 ಮಳೆ ಬಂದರೂ ತಕ್ಕ ಮಟ್ಟಿಗೆ ಸುಧಾರಿಸಬಹುದು ಎಂಬುದು ಕೃಷಿಕರ ಅಭಿಪ್ರಾಯ. ಹವಾಮಾನ ವೈಪರೀತ್ಯ ಭಯೋತ್ಪಾದನೆಗಿಂತಲೂ ಭೀಕರ. ಪರಿಸರ ನಾಶದಿಂದ ಮಾನವ ನಿರ್ಮಿತ ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿವೆ. ವಿದ್ಯಾವಂತರು, ಉನ್ನತ ಹುದ್ದೆಯಲ್ಲಿರುವವರು ತಮ್ಮ ಮನೆಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿ ಕೂಡಾ ಹೆಚ್ಚುತ್ತಿದೆ. ಪರಿಸರ ಸ್ವಚ್ಛತೆ ಕುರಿತು ನಿರಂತರ ಜಾಗೃತಿ ಜೊತೆಗೆ ಕಠಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ ಎನ್ನುತ್ತಾರೆ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ.

ಸ್ವಚ್ಛತೆ ಕಡೆಗೆ ನಗರ ಪಂಚಾಯತ್ ಹೆಚ್ಚಿನ ಆಧ್ಯತೆ ನೀಡಿದೆ. ಹಾಗಿದ್ದೂ ಕೆಲವರು ಉದ್ದೇಶಪೂರ್ವಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಬತ್ತುತ್ತಿರುವ ಹೊಳೆಯ ನೀರಿಗೂ ತ್ಯಾಜ್ಯ ಸುರಿದು ಅದನ್ನೂ ಪ್ರಾಣಿ-ಪಕ್ಷಿಗಳು ಕುಡಿಯದಂತೆ ಮಾಡುತ್ತಿದ್ದಾರೆ. ಇಂತವರ ಮೇಲೆ ಕಠಿನ ಕ್ರಮ ಜರುಗಿಸಲಾಗುತ್ತಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಬೊಮ್ಮಾರಿನಲ್ಲಿ ನಾಲ್ಕು ಟ್ಯಾಂಕಿಗಳಿವೆ, ಒಂದರಲ್ಲೂ ನೀರಿಲ್ಲ

ಸುಳ್ಯ: ಬಿಸಿ ಬೇಗೆ ಏರುತ್ತಿದ್ದಂತೆ ಹಲವೆಡೆ ಕುಡಿಯುವ ನೀರಿಗೂ ತತ್ವಾರ. ಸರ್ಕಾರ ಕುಡಿಯುವ ನೀರಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದ್ದರೂ ಜನರು ನೀರಿಗಾಗಿ ಪರದಾಡುವುದು ನಿಂತಿಲ್ಲ. ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು ಪರಿಸರದಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ಬೃಹತ್ ನೀರಿನ ಟ್ಯಾಂಕಿಯನ್ನು ನಿರ್ಮಿಸಿ ವರ್ಷ ಕಳೆದರೂ ಇನ್ನೂ ಅದಕ್ಕೆ ನೀರು ತುಂಬಿಸುವ ಕೆಲಸ ನಡೆದಿಲ್ಲ.
ಗ್ರಾಮೀಣ ಕಿರು ನೀರು ಸರಬರಾಜು ಯೋಜನೆಯಲ್ಲಿ ಪೊಯ್ಯೆತೋಟ ಎಂಬಲ್ಲಿ 8 ಲಕ್ಷ ವೆಚ್ಚದಲ್ಲಿ 30 ಸಾವಿರ ಲೀಟರ್‌ನ ಟ್ಯಾಂಕಿ ನಿರ್ಮಿಸಿ ಅದಕ್ಕೆ ಹತ್ತಿರದಲ್ಲಿ ಕೊಳವೆ ಬಾವಿ ನಿರ್ಮಿಸಿ ಪಂಪ್ ಅಳವಡಿಸಲಾಗಿದೆ. ಬೊಮ್ಮಾರು ಪರಿಶಿಷ್ಟ ಪಂಗಡ ಕಾಲೊನಿಯಲ್ಲಿ ಗ್ರಾಮ ಪಂಚಾಯತ್‌ನ 2012-13ನೇ ಸಾಲಿನ 13ನೇ ಹಣಕಾಸು ಯೋಜನೆಯ ಉಳಿಕೆ ಅನುದಾನದಲ್ಲಿ 25 ಸಾವರಿ ಲೀಟರ್‌ನ ಟ್ಯಾಂಕಿ ನಿರ್ಮಿಸಲಾಗಿದೆ. ತುಂಬೆತಡ್ಕ ಹಾಗೂ ಚಾಕೊಟೆಮೂಲೆ ಎಂಬಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ 25 ಸಾವಿರ ಲೀಟರ್ ಸಾಮರ್ಥ್ಯದ 2 ಟ್ಯಾಂಕಿ ನಿರ್ಮಿಸಲಾಗಿದೆ. ಅದಕ್ಕೆ ಪ್ರತ್ಯೇಕ ಕೊಳವೆ ಬಾವಿ ಕೊರೆಯಿಸಿ ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಈ ಎಲ್ಲಾ ಕಾಮಗಾರಿ ಮುಗಿದು ವರ್ಷ ಒಂದು ಕಳೆದರೂ ಈ ಭಾಗದ ಜನರಿಗೆ ನೀರು ಪೂರೈಕೆ ಮಾತ್ರ ಆಗುತ್ತಿಲ್ಲ. ಸರ್ಕಾರದ ಲಕ್ಷಾಂತರ ರೂಪಾಯಿ ಉಪಯೋಗ ಇಲ್ಲದೆ ತುಕ್ಕು ಹಿಡಿಯುತ್ತಿದೆ. ಜನರು ನೀರಿಗಾಗಿ ಪರದಾಡುತ್ತಿದ್ದಾರೆ.

ಪಂಪ್ ಆಪರೇಟರ್ ನೇಮಕವಾಗಿಲ್ಲ:

ನಾಲ್ಕು ಟ್ಯಾಂಕ್ ಮೂಲಕ ಪರಿಸರದ ಸುಮಾರು 50 ಮನೆಗಳಿಗೆ ನೀರಿನ ಸಂಪರ್ಕ ನೀಡಲು ಸಾಧ್ಯವಿದ್ದು, ರಸ್ತೆ ಬದಿಗಳಲ್ಲಿ ಪೈಪ್ ಕೂಡಾ ಅಳವಡಿಸಲಾಗಿದೆ. ಎರಡು ಪ್ರತ್ಯೇಕ ವಿದ್ಯುತ್ ಪರಿವರ್ತಕ ಅಳವಡಿಸಿ ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಹಾಗಿದ್ದೂ ಇಲ್ಲಿ ನೀರು ಬಳಕೆದಾರರ ಸಮಿತಿ ರಚಿಸಿ, ಪಂಪ್ ಆಪರೇಟರ್ ನೇಮಕ ಮಾಡಿ ನೀರು ಸರಬರಾಜು ಮಾಡಬೇಕಾದ ಗ್ರಾಮ ಪಂಚಾಯತ್ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಟ್ಯಾಂಕಿಗಳ ರಚನೆ ಆಗಿದ್ದು, ಅದನ್ನು ಇನ್ನೂ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿಲ್ಲ. ಅಲ್ಲದೆ ಈಗಾಗಲೇ ಹಾಕಿದ ಪೈಪ್ ಮತ್ತು ಗೇಟ್ ವಾಲ್ವ್‌ಗಳನ್ನು ಕಳವು ಮಾಡಲಾಗಿದೆ. ಮತ್ತೆ ಗೇಟ್‌ವಾಲ್ವ್ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಈಶ್ವರಪ್ಪ ಗೌಡ ಹರ್ಲಡ್ಕ ತಿಳಿಸಿದ್ದಾರೆ.

ಊರಿನವರಿಂದಲೇ ಅಡ್ಡಿ:

ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಸಲು ಅಲ್ಲಿನ ಪಂಚಾಯತ್ ಸದಸ್ಯರೇ ಅಡ್ಡಿ ಮಾಡಿದ್ದಾರೆ. ವಿದ್ಯುತ್ ಬಿಲ್ ಬರುತ್ತದೆ. ಯೋಜನೆ ಬೇಕಿಲ್ಲ ಎಂದು ಸದಸ್ಯರೊಬ್ಬರು ಹೇಳಿದ್ದರು. ಹರ್ಲಡ್ಕದಲ್ಲಿ ಕೊಳವೆ ಬಾವಿ ಕೊರೆಯುಸುವ ಸಂದರ್ಭ ಪಂಚಾಯತ್ ಅಧ್ಯಕ್ಷರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಅಲ್ಲಿ ಸಮರ್ಥ ವಿರೋಧ ಪಕ್ಷವಿಲ್ಲದೇ ಇರುವುದರಿಂದ ಆ ಗ್ರಾಮ ಯಾವತ್ತೂ ಅಭಿವೃದ್ಧಿ ಆಗಲಾರದು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸರಸ್ವತಿ ಕಾಮತ್ ಹೇಳಿದ್ದಾರೆ.
ಪೊಯ್ಯೆತೋಟದ ಟ್ಯಾಂಕಿ ಕಾಮಗಾರಿ ಮುಗಿದು ವರ್ಷ ಕಳೆದಿದೆ. ಅದನ್ನು ಆಗಲೇ ಪಂಚಾಯತ್‌ಗೆ ಹಸ್ತಾಂತರಿಸಿ ಆಗಿದೆ. ಅಲ್ಲದೆ ಬೊಮ್ಮಾರಿನಲ್ಲಿ ಪಂಚಾಯತ್ ಅನುದಾನದಲ್ಲೇ ಟ್ಯಾಂಕಿ ನಿರ್ಮಿಸಿದ್ದು, ಅದನ್ನು ಹಸ್ತಾಂತರಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಚಾಕೊಟೆಮೂಲೆ ಟ್ಯಾಂಕಿ ವಿದ್ಯುತ್ ಸಂಪರ್ಕ ಆಗಿರಲಿಲ್ಲ. ಒಂದೆರಡು ದಿನದಲ್ಲಿ ಸಂಪರ್ಕ ಆದ ಕೂಡಲೇ ಹಸ್ತಾಂತರಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಜ್ಯೂನಿಯರ್ ಎಂಜಿನಿಯರ್ ಜನಾರ್ದನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News