ಮಂಗಳೂರು: ಬಾಲ್ಯವಿವಾಹಕ್ಕೆ ಪ್ರೇರಣೆ ನೀಡುವವರಿಗೂ ಶಿಕ್ಷೆ: ಉಮಾಶ್ರೀ

Update: 2016-03-27 16:01 GMT

ಮಂಗಳೂರು, ಮಾ. 27:ಬಾಲ್ಯವಿವಾಹವನ್ನು ತಡೆಗಟ್ಟಲು ರಾಜ್ಯ ಸರಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಬಾಲ್ಯವಿವಾಹಕ್ಕೆ ಸಂಬಂಧಪಟ್ಟಂತೆ ಆರೋಪಿ ಸ್ಥಾನದಲ್ಲಿರುವವರಿಗೆ ಕನಿಷ್ಠ ಒಂದು ವರ್ಷ ಗರಿಷ್ಠ ಎರಡು ವರ್ಷ ಶಿಕ್ಷೆಯನ್ನು ನೀಡುವ ಕಾನೂನನ್ನು ಜಾರಿಗೆ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
   ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹಿಂದೆ ಬಾಲ್ಯವಿವಾಹಕ್ಕೆ ಕನಿಷ್ಟ ಶಿಕ್ಷೆಯೆಂಬುದಿರಲಿಲ್ಲ. ಇದೀಗ ಕನಿಷ್ಟ ಶಿಕ್ಷೆಯನ್ನು ರೂಪಿಸಲಾಗಿದೆ. ಬಾಲ್ಯ ವಿವಾಹಕ್ಕೆ ಪ್ರೇರಣೆ ನೀಡುವ ತಂದೆ ತಾಯಿ, ಅಕ್ಕಪಕ್ಕದವರು , ದಲ್ಲಾಳಿಗಳಿಗೆ ಈ ಕಾನೂನು ವ್ಯಾಪ್ತಿಯಲ್ಲಿ ಶಿಕ್ಷೆಯಾಗಲಿದೆ ಎಂದು ಹೇಳಿದರು.
 ರಾಜ್ಯ ಸರ್ಕಾರವು ಮಹಿಳೆಯರ ಅಭಿವೃದ್ದಿಗೆ ಸಂಬಂಧಪಟ್ಟು ಸಾಕಷ್ಟು ಕೆಲಸಗಳನ್ನು ಮಾಡಿದ್ದು ಇದೀಗ ಮಂಗಳಮುಖಿಯರಿಗೆ ಹೊಸ ನೀತಿ, 18 ವರ್ಷದ ಒಳಗಿನ ಬಾಲಕಿಯರಿಗೆ ನೀತಿ, ಮಹಿಳಾ ನೀತಿ, ಸಬಲೀಕರಣ ನೀತಿಯನ್ನು ಜಾರಿಗೆ ತರಲಾಗುವುದು. ಈ ನೀತಿಗಳು ವಿಧಾನಸಭೆಯಲ್ಲಿ ಬಜೆಟ್ ಮೇಲೆ ಪ್ರಸ್ತಾವಿಸಲಾಗಿದ್ದು ವಿಧಾನಪರಿಷತ್‌ನಲ್ಲಿ ಮಂಡನೆಯಾಗಲು ಬಾಕಿಯಿದೆ ಎಂದು ಹೇಳಿದರು.
 ಅತ್ಯಾಚಾರ ಸಂತ್ರಸ್ತೆಯರಿಗೆ ಒಂದೆ ಕಡೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ವಿಶೇಷ ಚಿಕಿತ್ಸಾ ಘಟಕವನ್ನು ಕೇಂದ್ರ ಸರಕಾರ ಸ್ಥಾಪಿಸುವ ಮೊದಲೆ ರಾಜ್ಯ ಸರಕಾರ ಸ್ಥಾಪಿಸಿದೆ. ರಾಜ್ಯದಲ್ಲಿ 30 ಜಿಲ್ಲೆಯಲ್ಲಿಯೂ ವಿಶೇಷ ಚಿಕಿತ್ಸಾ ಘಟಕ ಕಾರ್ಯಚರಿಸುತ್ತಿದೆ ಎಂದು ಹೇಳಿದರು.
     ಜಿಲ್ಲೆಯಲ್ಲಿ ಅತ್ಯಾಚಾರ ತಡೆ ಸಲಹಾ ಸಮಿತಿ ಅಧ್ಯಕ್ಷ ಉಗ್ರಪ್ಪ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಗಮನಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಅತ್ಯಾಚಾರ ಸಂತ್ರಸ್ತೆಯರಿಗೆ ಪರಿಹಾರ ವಿತರಿಸದೆ ಇರುವ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿ ಅಧಿಕಾರಿಯ ಮೇಲೆ ವಾಗ್ದಳಿ ನಡೆಸಿದ್ದರು. ಅತ್ಯಾಚಾರ ಸಂತ್ರಸ್ತೆಯರಿಗೆ ನೀಡಬೇಕಾದ ಸ್ಥೈರ್ಯನಿಧಿ ಸದ್ಬಳಕೆ ಆಗಿಲ್ಲ ಎನ್ನುವ ಅಸಮಾಧಾನ ಅವರದಾಗಿತ್ತು. ವಾಸ್ತವವಾಗಿ ಸ್ಥೆರ್ಯನಿಧಿ ಜಿಲ್ಲೆಗಳಿಗೆ ಬಿಡುಗಡೆಯಾಗಿರಲಿಲ್ಲ. ಈ ಬಗ್ಗೆ ಅವರಿಗೆ ತಿಳಿಯದೆ ಅಧಿಕಾರಿಯ ವಿರುದ್ದ ಅಸಮಾಧಾನಗೊಂಡಿದ್ದರು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಇಬ್ರಾಹೀಂ ಕೋಡಿಜಾಲ್ ದಿವ್ಯಪ್ರಭಾ, ಎ.ಸಿ.ಭಂಡಾರಿ, ಬಾಲಕೃಷ್ಣ ಶೆಟ್ಟಿ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News