ದೇವಾಂಗ ಸಮಾಜಸ್ಥರು ಹಕ್ಕುಗಳಿಗಾಗಿ ಸಂಘಟಿತರಾಗಿ: ದೇವಾಂಗ ಸಮಾಜದ ರಾಷ್ಟ್ರೀಯ ಸಮಾವೇಶದಲ್ಲಿ ಸಚಿವೆ ಉಮಾಶ್ರೀ ಕರೆ
ಮಂಗಳೂರು. ಮಾ.27: ದೇವಾಂಗ ಸಮು ದಾಯದ ಜನರು ತಮ್ಮ ಹಕ್ಕುಗಳಿಗಾಗಿ ಪ್ರಬಲ ಹೋರಾಟ ಸಂಘಟಿಸಿದ ನಿದರ್ಶನ ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ದೇವಾಂಗ ಸಮಾಜದ ಹಿತದೃಷ್ಟಿಯಿಂದ ಇನ್ನಷ್ಟು ಬಲಪಡಿಸಿ ನ್ಯಾಯೋಚಿತವಾದ ಹಕ್ಕುಗಳಿಗೆ ಹೋರಾಟ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಉಮಾಶ್ರೀ ಕರೆ ನೀಡಿದರು.
ಮಂಗಳೂರು ದೇವಾಂಗ ಸಮಾಜದವರು ನಗರದ ಎಮ್ಮೆಕೆರೆ ಮೈದಾನದಲ್ಲಿ ರವಿವಾರ ಆಯೋಜಿಸಿದ್ದ ದೇವಾಂಗ ಸಮಾಜದ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗ ವಹಿಸಿ ಅವರು ಮಾತನಾಡು ತ್ತಿದ್ದರು.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ದೇವಾಂಗ ಸಮಾಜ ಸ್ಥರು ಸಂಘಟಿತರಾಗಬೇಕಾದ ಅಗತ್ಯವಿದೆ ಎಂದವರು ನುಡಿದರು.
ನೇಕಾರಿಕೆಗೆ ಈ ಬಾರಿಯ ಬಜೆಟ್ನಲ್ಲಿ 26 ಕೋ.ರೂ. ಪ್ಯಾಕೇಜನ್ನು ಇಡಲಾಗಿದೆ. ಶೇ.1ರ ಬಡ್ಡಿದರದಲ್ಲಿ ನೇಕಾರರಿಗೆ ಸಾಲ ನೀಡಲಾಗುತ್ತಿದೆ. ವಿದ್ಯುತ್ ಮೂಲಕ ನಡೆ ಸುವ ಮಗ್ಗಗಳಿಗೆ ಪವರ್ ಸಬ್ಸಿಡಿ ನೀಡಲು ಸರಕಾರ ತೀರ್ಮಾನಿಸಿದೆ ಎಂದವರು ಹೇಳಿದರು.
ದೇವಾಂಗ ಸಮುದಾಯದ ಶಕ್ತಿ ಸಮಗ್ರ ಸಮಾಜದ ಒಳಿತಿಗಾಗಿ ಬಳಕೆಯಾಗಲಿ: ಡಿವಿ
ಸಮಾವೇಶವನ್ನು ಉದ್ಘಾಟಿಸಿ ಮಾತನಾ ಡಿದ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ, ದೇವಾಂಗ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಪಾರಾಗಲು ದೇಶಾದ್ಯಂತವಿರುವ ಇಂತಹ ಸಮುದಾಯ ಸಂಘಟನೆಗಳು ಒಗ್ಗಟ್ಟಾಗಬೇಕು. ಸಮುದಾಯದ ಅಭಿವೃದ್ಧಿ ಯೊಂದಿಗೆ ಈ ಶಕ್ತಿ ದೇಶದ ಒಳಿತಿಗೂ ಕೊಡುಗೆಯಾಗಲಿ ಎಂದರು.
ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷ ಡಾ.ಜಿ.ರಮೇಶ್ ಮಾತನಾಡಿ, ಪ್ರಥಮ ಬಾರಿಗೆ 1943ರಲ್ಲಿ ಮಂಗಳೂರಿನಲ್ಲಿ ದೇವಾಂಗ ಸಂಘಟನೆ ಆರಂಭಗೊಂಡಿತ್ತು. ಆದರೆ ಇಂದೂ ಕೂಡಾ ಈ ಸಮುದಾಯ ತೀರಾ ಹಿಂದು ಳಿದಿದೆ. ಈ ಬಗ್ಗೆ ಚಿಂತನೆ ಅಗತ್ಯ ಎಂದರು.
ಸಂಸದ ನಳಿನ್ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೊ ಮಾತನಾಡಿದರು.
ವಿವಿಧ ರಾಜ್ಯಗಳ ಪ್ರತಿನಿಧಿಗಳು: ಸಮಾ ವೇಶದಲ್ಲಿ ದೇವಾಂಗ ಸಮಾಜದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಝಾರ್ಖಂಡ್ ಶಾಸಕ ಮೋತಿಲಾಲ್ ದೇವಾಂಗ, ರಾಷ್ಟ್ರೀಯ ದೇವಾಂಗ ಒಕ್ಕೂಟದ ಅಧ್ಯಕ್ಷ ಅರುಣ್, ಒಡಿಶಾ ದೇವಾಂಗ ಸಮಾಜದ ಪ್ರತಿನಿಧಿ ಗೋಪಿನಾಥ್, ತಮಿಳು ನಾಡಿನ ಪ್ರತಿನಿಧಿ ಲಕ್ಷ್ಮಣ್ ಉಪಸ್ಥಿತರಿದ್ದರು.
ಹಂಪಿಯ ಶ್ರೀ ಗಾಯತ್ರಿ ಪೀಠದ ಸ್ವಾಮೀಜಿ ಶ್ರೀದಯಾನಂದ ಪುರಿ, ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಸ್ವಾಮೀಜಿ ಯೋಗಾನಂದ ಸರಸ್ವತಿ, ಶ್ರಿ ರಾಮಕೃಷ್ಣ ಮಠದ ಸ್ವಾಮೀಜಿ ಜಿತಕಾಮಾನಂದಾಜಿ, ಮಾಜಿ ಶಾಸಕ ಕುಂಬ್ಳೆ ಸುಂದರರಾವ್, ರವೀಂದ್ರ ಕಲ್ಬುರ್ಗಿ, ಸಂಘದ ಅಧ್ಯಕ್ಷ ವೆಂಕಟೇಶ್ ಆರ್., ಹಿರಿಯ ಮುಖಂಡ ಸಂಜೀವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.