ಜೈಲಿನ ಮೊಬೈಲ್ ಜಾಮರ್ ಅವಾಂತರ: ಸಮಸ್ಯೆ ಪರಿಹರಿಸಲು ಡಿಸಿ ಸೂಚನೆ
ಮಂಗಳೂರು, ಮಾ.28: ನಗರದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹ ಆವರಣದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ನಿಂದ ಸ್ಥಳೀಯರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಮೊಬೈಲ್ ಜಾಮರ್ ಕಂಪೆನಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಮಾತನಾಡಿದ ಅವರು, ಜಾಮರ್ ಅಳವಡಿಕೆಯಿಂದ ಸುತ್ತಮುತ್ತಲಿನ ಮೊಬೈಲ್ ಫೋನ್ ಬಳಕೆದಾರರಿಗೆ ತೊಂದರೆಯಾಗುವುದು ಗಮನಕ್ಕೆ ಬಂದಿದೆ. ಇದನ್ನು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಹೈದರಾಬಾದ್ ಮೂಲದ ಜಾಮರ್ ಕಂಪೆನಿಯ ಅನಿಲ್ರಿಗೆ ಸೂಚನೆ ನೀಡಿದರು.
ಬಿಎಸ್ಸೆನ್ನೆಲ್, ಏರ್ಟೆಲ್, ಐಡಿಯಾ, ವೊಡಾಫೋನ್ ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದು, ಮೊಬೈಲ್ ಜಾಮರ್ನಿಂದಾಗಿರುವ ಸಮಸ್ಯೆಯನ್ನು ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿದರು. ಜೈಲ್ನಲ್ಲಿ ಮೊಬೈಲ್ ಫೋನ್ಗಳ ಬಳಕೆಗೆ ಅವಕಾಶ ನೀಡದೆ, ಅಲ್ಲಿನ ಸುರಕ್ಷತೆಯ ಜವಾಬ್ದಾರಿಯ ಜೊತೆಗೆ ಸಾರ್ವಜನಿಕರಿಗಾಗಿರುವ ತೊಂದರೆಯನ್ನು ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿ ಅನಿಲ್ರಿಗೆ ಸೂಚಿಸಿದರು.