ವರದಕ್ಷಿಣೆ ಕಿರುಕುಳದ ಆರೋಪ: ಪತ್ನಿಯಿಂದ ದೂರು
ಮಂಗಳೂರು, ಮಾ. 29: ಪತಿ ಮತ್ತು ಆತನ ಮನೆಯವರು ಸೇರಿ ವರದಕ್ಷಿಣೆಗೆ ಒತ್ತಾಯಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವ ಬಗ್ಗೆ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೋಕಟ್ಟೆಯ ನಿವಾಸಿ ಎಸ್.ವಿ.ಶೇಖಬ್ಬ ಎಂಬವರ ಪುತ್ರ ಮುಹಮ್ಮದ್ ಮನ್ಸೂರ್(36) ವಿರುದ್ಧ ಆತನ ಪತ್ನಿ ಬಜ್ಪೆಯ ನಿವಾಸಿ ಮುಹಮ್ಮದ್ ಹನೀಫ್ ಎಂಬವರ ಪುತ್ರಿ ನೌಶೀದಾ ಬಾನು (21) ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2015ರ ಜನವರಿ 26ರಂದು ನೌಶಿದಾ ಬಾನು ಮತ್ತು ಮುಹಮ್ಮದ್ ಮನ್ಸೂರ್ ವಿವಾಹ ನಡೆದಿತ್ತು. ಮದುವೆ ಸಂದರ್ಭದಲ್ಲಿ ಒಟ್ಟು 67 ಪವನ್ ಚಿನ್ನ ನೀಡಲಾಗಿತ್ತು. ಮದುವೆಯ ಕೆಲ ಸಮಯದ ಬಳಿಕ ಗಂಡ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ನೌಶೀದಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಮನ್ಸೂರ್ ಗಲ್ಫ್ ರಾಷ್ಟ್ರಕ್ಕೆ ತೆರಳಿದು,್ದ ಗಲ್ಫ್ಗೆ ತೆರಳುವ ಮುನ್ನ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಇದಕ್ಕೆ ಮಾವ ಶೇಖಬ್ಬ, ಅತ್ತೆ ಖತೀಜಾಮತ್ತು ನಾದಿನಿಯರಾದ ರುಖಿಯ್ಯೆ ಮತ್ತು ಸಕೀನಾ ಎಂಬವರು ಸಾಥ್ ನೀಡಿದ್ದು, ಇವರೆಲ್ಲರೂ ಸೇರಿ ಕಿರುಕುಳ ನೀಡುತ್ತಿದ್ದರಲ್ಲದೆ, ಮನ್ಸೂರ್ ನೌಶೀದಾ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ವರದಕ್ಷಿಣೆ ತರದಿದ್ದರೆ ತಲಾಖ್ ನೀಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ. ಗಂಡ, ಅತ್ತೆ, ಮಾವ ಮತ್ತು ನಾದಿನಿಯರ ಕಿರುಕುಳವನ್ನು ತಾಳಲಾರದೆ ನೌಶೀದಾ ಪದೇ ಪದೇ ತವರು ಮನೆಗೆ ಬಂದು ತಂದೆಯಲ್ಲಿ ದೂರುತಿದ್ದರೆನ್ನಲಾಗಿದೆ. ಕಳೆದ ಶುಕ್ರವಾರ ನೌಶೀದಾ ಬಜ್ಪೆ ಠಾಣೆಗೆ ತೆರಳಿ ಗಂಡ ಮತ್ತು ಗಂಡನ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.