ಲಾರಿ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಸಾವು, ಸಹಸವಾರ ಗಂಭೀರ

Update: 2016-03-29 18:49 GMT

 ಉಪ್ಪಿನಂಗಡಿ, ಮಾ.29: ದ್ವಿಚಕ್ರ ವಾಹನ ಹಾಗೂ ಲಾರಿ ಮುಖಾಮುಖಿ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮುರಿಯಾಳ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.


ಬಂದಾರು ಗ್ರಾಮದ ಬೊಳಿಜಾ ನಿವಾಸಿ ಮಾಧವ ಪೂಜಾರಿ ಎಂಬವರ ಪುತ್ರ ಕೃತಿಕ್ (17) ಮೃತ ಯುವಕ. ಸಹಸವಾರ ಕಾರಿಂಜ ಬೈತಾರು ನಿವಾಸಿ ಸಫಿಯಾ ಎಂಬವರ ಪುತ್ರ ರಫೀಕ್ (23) ಗಂಭೀರ ಗಾಯಗೊಂಡಿದ್ದು ಈತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವಿವರ:  ಕಾರಿಂಜ ಬೈತಾರು ಕಡೆಯಿಂದ ಇಂದು ಬೆಳಗ್ಗೆ ಕೃತಿಕ್ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಕರಾಯ ಕಡೆಗೆ ಬಂದಿದ್ದು, ಈ ಸಂದರ್ಭ ಕೂಲಿ ಕಾರ್ಮಿಕ ರಫೀಕ್ ಎಂಬಾತ ಈತನಲ್ಲಿ ಕರಾಯಕ್ಕೆ ಡ್ರಾಪ್ ಕೇಳಿದ್ದಾನೆ. ಆತನನ್ನು ಹಿಂಬದಿ ಕುಳ್ಳಿರಿಸಿಕೊಂಡು ಮುರಿಯಾಳ ಎಂಬಲ್ಲಿಗೆ ತಲುಪುತ್ತಿದ್ದಂತೆ ಕೊಳವೆ ಬಾವಿ ಪೈಪ್ ಸಾಗಾಟದ ಲಾರಿ ಇವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಲಾರಿಯೆಡೆಗೆ ಸಿಲುಕಿದ ಕೃತಿಕ್‌ನನ್ನು ಹರಸಾಹಸ ಪಟ್ಟು ಹೊರಗೆ ತೆಗೆಯಲಾಗಿದ್ದು, ಅಷ್ಟರಲ್ಲೇ ಈತ ಮೃತಪಟ್ಟಿದ್ದ. ಸಹಸವಾರ ರಫೀಕ್ ಗಂಭೀರ ಗಾಯಗೊಂಡಿದ್ದಾನೆ.


ಮೃತನ ತಂದೆ ಬೀಡಿ ಬ್ರಾಂಚ್ ನಡೆಸುತ್ತಿದ್ದು, ಈತನಿಗೆ ತಂದೆ, ತಾಯಿ ಹಾಗೂ ಒಬ್ಬ ಸಹೋದರನಿದ್ದಾನೆ.


ಮೃತ ಕೃತಿಕ್ ವಿದ್ಯಾರ್ಥಿಯಾಗಿದ್ದು, ಗುರು ದೇವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾ ರ್ಥಿಯಾಗಿದ್ದ. ಸೋಮವಾರವಷ್ಟೇ ಕೊನೆಯ ಪರೀಕ್ಷೆ ಬರೆದು ಮನೆಗೆ ಬಂದಿದ್ದ ಈತ ತನ್ನ ನೆರೆಮನೆಯವರು ಕಾರಿಂಜ ಬೈತಾರು ಕಡೆ ಖರೀದಿಸಿದ್ದ ಜಾಗಕ್ಕೆ ನೆರೆಮನೆಯವರದ್ದೇ ದ್ವಿಚಕ್ರ ವಾಹನ ಪಡೆದು ತೆರಳಿದ.್ದ ನಿನ್ನೆ ರಾತ್ರಿ ಅಲ್ಲಿರುವ ಮನೆಯಲ್ಲೇ ವಾಸ್ತವ್ಯವಿದ್ದು ಇಂದು ಬೆಳಗ್ಗೆ ತನ್ನ ಮನೆಗೆ ವಾಪಸಾಗುತ್ತಿದ್ದ. ಆದರೆ ಮನೆ ತಲುಪುವ ಮುನ್ನವೇ ಈತ ವಿಧಿಯ ಕ್ರೂರ ಲೀಲೆಗೆ ತುತ್ತಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News