ರಾಜ್ಯ ಸರಕಾರದ ಮರಳು ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2016-03-29 18:52 GMT

ಮಂಗಳೂರು, ಮಾ. 29: ರಾಜ್ಯ ಸರಕಾರದ ಮರಳು ನೀತಿಯಿಂದಾಗಿ ಮಂಗಳೂರು ನಗರದಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ಆರೋಪಿಸಿ ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರದ ಅಧ್ಯಕ್ಷ ರವಿಶಂಕರ್ ಮಿಜಾರ್, ಜಿಲ್ಲಾಡಳಿತದಿಂದಾಗಿ ಜಿಲ್ಲೆಯಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ದೂರಿದರು. ಮರಳಿನ ಅಭಾವದಿಂದಾಗಿ ಮನೆ ಕಟ್ಟಲು ಮುಂದಾಗಿರುವ ಬಡವರು, ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ಮರಳು ದೊರೆಯದೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡು ಅದನ್ನೇ ನಂಬಿಕೊಂಡಿರುವ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ ಎಂದು ಹೇಳಿದರು. ಜಿಲ್ಲಾಡಳಿತದಿಂದ ಮರಳುಗಾರಿಕೆಗೆ 11 ಜನರಿಗೆ ಟೆಂಡರ್ ಒದಗಿಸಲಾಗಿದೆ. ಆದರೆ ಅವರಿಗೆ ಮರಳು ದಿಣ್ಣೆಯಿಂದ ಸ್ಟಾಕ್‌ಯಾರ್ಡ್‌ಗೆ ಮರಳು ಹಾಕಲು ಮಾತ್ರ ಅವಕಾಶವಿದೆ. ಬಿ.ಸಿ.ರೋಡ್‌ನಲ್ಲಿ ಮರಳು ಸ್ಟಾಕ್‌ಯಾರ್ಡ್ ಇದ್ದು, ಅಲ್ಲಿ 4,000 ರೂ.ಗೆೆ ಸಿಗುವ ಮರಳನ್ನು ಮಂಗಳೂರಿಗೆ ತರಲು ವಾಹನ ಬಾಡಿಗೆ ಸೇರಿ ಒಂದು ಲಾರಿಗೆ ಏಳೆಂಟು ಸಾವಿರ ರೂ. ವ್ಯಯಿಸಬೇಕಾಗುತ್ತದೆ. ಒಂದು ಲೋಡ್ ಮರಳು ಖರೀದಿಸಬೇಕಾದರೆ ಸುಮಾರು 10,000 ರೂ.ಗಳನ್ನು ತೆರಬೇಕಾಗುತ್ತದೆ. ನೈಸರ್ಗಿಕವಾಗಿ ನಮ್ಮಲ್ಲೇ ದೊರೆಯುವ ಮರಳಿಗೆ ಇಷ್ಟೊಂದು ಬೆಲೆಯಾಗಿರುವುದು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಜನವಿರೋಧಿ ಮರಳು ನೀತಿಯಿಂದ ಎಂದು ಅವರು ಆಪಾದಿಸಿದರು.

ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಅಕ್ರಮ ಮರಳು ಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆಪಾದಿಸಿದರು. ಮರಳಿಲ್ಲದೆ ಮನಪಾ ವ್ಯಾಪ್ತಿ ಯಲ್ಲಿ ಸರಕಾರಿ ನಿರ್ಮಾಣ ಕಾಮ ಗಾರಿಗಳು ನನೆಗುದಿಗೆ ಬಿದ್ದಿವೆ. ಮರಳು ನೀತಿಯನ್ನು ಸರಿಪಡಿಸಿ ಸರಳೀಕರಿಸದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಮನಪಾ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ಸತೀಶ್ ಪ್ರಭು, ವಿಜಯ ಕುಮಾರ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News