ಉಪ್ಪಿನಂಗಡಿ : "ಅದ್ಭುತ ಪಾಂಡಿತ್ಯದ, ಮೇರು ವ್ಯಕ್ತಿತ್ವದ ಮಹಾನ್ ಪಂಡಿತ"-ಅಶ್ರಫ್ ಬಾಖವಿ
ಉಪ್ಪಿನಂಗಡಿ: ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಉಸ್ತಾದ್ರವರು ರಾಷ್ಟ್ರದ ಮುಸ್ಲಿಂ ಸಮುದಾಯ ಕಂಡ, ಒಪ್ಪಿಕೊಂಡ ಅದ್ಭುತ ಪಾಂಡಿತ್ಯದ, ಮೇರು ವ್ಯಕ್ತಿತ್ವದ ಮಹಾನ್ ಪಂಡಿತ, ಮೇದಾವಿಯಾಗಿದ್ದರು ಎಂದು ಕರಾಯ ಬದ್ರಿಯಾ ಜುಮಾ ಮಸೀದಿ ಖತೀಬ್ ಅಶ್ರಫ್ ಬಾಖವಿ ಹೇಳಿದರು.
ಅವರು ಮಾ. 29ರಂದು ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್ಮೆಂಟ್ ಹಾಗೂ ಉಪ್ಪಿನಂಗಡಿ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಮತ್ತು ಮಾಲಿಕ್ದೀನಾರ್ ಆಡಳಿತ ಸಮಿತಿ ಉಪ್ಪಿನಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಮಾಲಿಕ್ದೀನಾರ್ ಜುಮಾ ಮಸೀದಿ ವಠಾರದಲ್ಲಿ ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ರವರ ಅನುಸ್ಮರಣೆ ಹಾಗೂ ಎಸ್ಕೆಎಸ್ಎಸ್ಎಫ್ ರಾಜ್ಯಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ರವರ ಸರಳ, ಆದರ್ಶ ಜೀವನ ಹಾಗೂ ಅವರ ತತ್ವಗಳು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಸಂಸ್ಥೆಯಲ್ಲಿ ಕಳೆದ 20 ವರ್ಷಗಳ ಕಾಲ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಉಳಿಸಿಕೊಂಡಿದ್ದು, ಅಂತಹ ವ್ಯಕ್ತಿಯ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಅಪಾರ ನಷ್ಟವನ್ನು ಉಂಟು ಮಾಡಿದೆ ಎಂದರು.
ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬಿಜಾಪುರ, ಗದಗ ಮೊದಲಾದ ಪ್ರದೇಶಗಳಲ್ಲಿ ದೀನಿ ಸೇವೆಗಳನ್ನು ವೃದ್ಧಿಗೊಳಿಸುವ ಸಲುವಾಗಿ ಎಸ್ಕೆಎಸ್ಎಸ್ಎಫ್ ಸಹಯೋಗದಲ್ಲಿ ದಾಹ ಸಂಸ್ಥೆಯ ಉಲೆಮಾಗಳ ಮೂಲಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ನಡೆಸುತ್ತಿದ್ದು, ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದರು.
ಉಪ್ಪಿನಂಗಡಿ ಮಾಲಿಕ್ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಲವರು ಸಮಸ್ತ ಸಂಸ್ಥೆಯ ವಿರುದ್ಧ, ಉಲೆಮಾಗಳ ವಿರುದ್ಧ ಮತ್ತು ಸಂಘಟನೆಯಲ್ಲಿ ಗುರುತಿಸಿಕೊಂಡವರನ್ನು ಅವಹೇಳನ ಮಾಡುತ್ತಾ ಸಂಘಟನೆಯ ಬಲಹೀನ ಮಾಡುವ ಕೃತ್ಯ ನಡೆಸುತ್ತಿದ್ದಾರೆ, ಇದಕ್ಕೆ ಯಾರೂ ವಿಚಲಿತರಾಗದೆ ತಮ್ಮನ್ನು ಸಮಸ್ತ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಉತ್ತರ ನೀಡಬೇಕು ಎಂದು ಹೇಳಿದರು.
ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಅನಸ್ ತಂಙಳ್ ದುವಾಃ ನೆರವೇರಿಸಿದರು. ದಾರುಲ್ ಹುದಾ ಚೆಮ್ಮಾಡ್ ಇದರ ಪ್ರೊಫೇಸರ್ ಕೆ.ಸಿ. ಮುಹಮ್ಮದ್ ಬಾಖಾವಿ ಮುಖ್ಯ ಪ್ರಭಾಷಣ ನೀಡಿದರು. ಕೆ.ಐ.ಸಿ ಕುಂಬ್ರ ಇದರ ಮೆನೇಜರ್ ಹುಸೈನ್ ದಾರಿಮಿ ಸಂದರ್ಭೋಚಿತವಾಗಿ ಮಾತನಾಡಿದರು.
ಸಮಾರಂಭದಲ್ಲಿ ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೇಜಾಲ್, ಕರಾಯ ಮಸೀದಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಹಾಜಿ, ಪೆರಿಯಡ್ಕ ಮಸೀದಿ ಅಧ್ಯಕ್ಷ ಯು.ಕೆ. ಹಮೀದ್, ಕುದ್ಲೂರು ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮರುವೇಲ್, ಬೆದ್ರೋಡಿ ಮಸೀದಿ ಅಧ್ಯಕ್ಷ ಮಹಮ್ಮದ್, ಮಠ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
ಉಪ್ಪಿನಂಗಡಿ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಎಸ್.ಎ. ಅಮೀರ್ ಅರ್ಶದಿ ಸ್ವಾಗತಿಸಿ, ಉಪ್ಪಿನಂಗಡಿ ಮಾಲಿಕ್ದೀನಾರ್ ಹಿಫುಲ್ ಕುರ್ಆನ್ ಕಾಲೇಜು ಉಪನ್ಯಾಸಕ ಹಾಫಿಲ್ ತ್ವಯ್ಯಿಬ್ ಖಾಸಿಮಿ ಜಾರ್ಖಾಂಡ್ ಕಿರಾಅತ್ ಪಠಿಸಿದರು. ಉಪ್ಪಿನಂಗಡಿ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಕೆ.ಎಚ್. ಅಶ್ರಫ್ ಹನೀಫಿ ವಂದಿಸಿದರು. ಪಿ.ಎ. ಮರ್ದಾಳ ಕಾರ್ಯಕ್ರಮ ನಿರೂಪಿಸಿದರು.