ಮರಳು ಸಾಗಾಟದ ಲಾರಿಗಳ ವಶ
Update: 2016-03-31 18:32 GMT
ಉಪ್ಪಿನಂಗಡಿ, ಮಾ.31: ಪ್ರೊಬೆಷನರಿ ಎಎಸ್ಪಿಲಕ್ಷ್ಮಣ ನಿಂಬರ್ಗಿ ನೇತೃತ್ವದಲ್ಲಿ ಗುರುವಾರ ಉಪ್ಪಿನಂಗಡಿ ಸುತ್ತಮುತ್ತ ಅಕ್ರಮವಾಗಿ ಮರಳು ಸಾಗಿಸುವ 5 ಲಾರಿಗಳನ್ನು ವಶಪಡಿಸಿಕೊಂಡ ಪೊಲೀಸರು, ನಾಲ್ಕು ಲಾರಿಗಳಿಗೆ ದಂಡ ವಿಧಿಸಿ, ಲಾರಿ ಚಾಲಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದು, ಒಂದು ಲಾರಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಉಪ್ಪಿನಂಗಡಿ ಸುತ್ತಮುತ್ತ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಎಎಸ್ಪಿ ಲಕ್ಷ್ಮಣ ನಿಂಬರ್ಗಿ, ಒಂದು ಲಾರಿಯನ್ನು ಮರಳು ಸಾಗಿಸುತ್ತಿದ್ದ ವೇಳೆ ಬಾರ್ಯ ಗ್ರಾಮದ ಅಜಿರ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬಳಿಕ ನೇತ್ರಾವತಿ ನದಿ ಕಿನಾರೆಯ ವಿವಿಧ ಪ್ರದೇಶಗಳಿಗೆ ದಾಳಿ ನಡೆಸಿ, ಅಲ್ಲಿ ನಿಲ್ಲಿಸಿದ್ದ ಮರಳು ಸಾಗಾಟಕ್ಕೆ ಬಳಸುವ ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡು ತಲಾ 300ರಂತೆ ದಂಡ ವಿಧಿಸಿ, ಎಚ್ಚರಿಕೆ ನೀಡಿ ಚಾಲಕರನ್ನು ಕಳುಹಿಸಿದ್ದಾರೆ.