ಜ್ಯುವೆಲ್ಲರ್ಸ್‌ಗೆ ಶೂಟೌಟ್ ಪ್ರಕರಣ: ಓರ್ವ ಆರೋಪಿ ಬಂಧನ

Update: 2016-04-01 15:54 GMT

ಪುತ್ತೂರು: ಪುತ್ತೂರಿನ ಜ್ಯುವೆಲ್ಲರ್ಸ್‌ ಮೇಲೆ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿಯೊಬ್ಬನನ್ನುಪುತ್ತೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳದ ಕಡಪ್ಪುರ ಮೊಗ್ರಾಲ್ ನಾಂಗಿ ನಿವಾಸಿ ಅಬ್ದುಲ್ ಆಸಿರ್ (21) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್ ಮಾಹಿತಿ ನೀಡಿದ್ದಾರೆ.

ಆಸಿರ್ ತನ್ನ ಜರ್ಕಿನ್ ಒಳಗೆ ಇರಿಸಿಕೊಂಡಿದ್ದ ಪರವಾನಿಗೆ ರಹಿತ ನಾಡ ಪಿಸ್ತೂಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಬಳಿ ವ್ಯಕ್ತಿಯೋರ್ವ ನಡೆದುಕೊಂಡು ಹೋಗುತ್ತಿದ್ದ ಎಂದು ಸಂಶಯ ವ್ಯಕ್ತಪಡಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ವ್ಯಕ್ತಿಯ ಅಂಗಶೋಧನೆ ನಡೆಸಿದಾಗ ರಿವಾಲ್ವರ್ ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಮಾಹಿತಿ ಕಲೆಹಾಕಲಾಗಿದೆ. ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಸಿಬ್ಬಂದಿಗಳಾದ ಪ್ರಶಾಂತ್ ರೈ, ಉದಯ ಕುಮಾರ್, ರಾಜೇಶ್, ಸ್ಕರಿಯ, ಪ್ರಶಾಂತ್ ಶೆಟ್ಟಿ, ಕೃಷ್ಣಪ್ಪ ಕಾರ್ಯಾಚರಣೆ ನಡೆಸಿದ್ದಾರೆ. ತನಿಖೆ ಮುಂದುವರಿಯುತ್ತಿದ್ದ ಇತರ ಆರೋಪಿಗಳ ಶೋಧ ನಡೆಯುತ್ತಿದೆ.

ಆರೋಪಿಯನ್ನು ವಿಚಾರಿಸಿದಾಗ ಪುತ್ತೂರಿನಲ್ಲಿ ಸ್ನೇಹಿತನನ್ನು ಭೇಟಿಯಾಗಿ ರೈಲಿನಲ್ಲಿ ಬೆಂಗಳೂರಿಗೆ ತೆರಳುವುದಾಗಿ ತಿಳಿಸಿದ್ದ. ವಿಚಾರಣೆಗೆ ಒಳಪಡಿಸಿದಾಗ ಹಫ್ತಾ ವಸೂಲಿಯಲ್ಲಿ ತೊಡಗಿರುವ ಉಪ್ಪಳದ ಕುಖ್ಯಾತ ಕಾಲಿಯಾ ರಫೀಕ್‌ನ ಸಹಚರ ಈತ ಎಂದು ತಿಳಿದುಬಂದಿತ್ತು. ಕೇರಳದ ಕೆಲವು ಕಡೆ ಗ್ಯಾಂಗ್‌ವಾರ್ ನಡೆಯುತ್ತಿದ್ದ ತಂಡದಿಂದ ಆಸಿರ್ ತಪ್ಪಿಸಿಕೊಂಡು ಬಂದಿದ್ದ. ನಿರ್ದಿಷ್ಟ ಪ್ರದೇಶದಲ್ಲಿ ನಿಲ್ಲದೇ ಸದಾ ಒಂದಿಲ್ಲೊಂದು ಪ್ರದೇಶಕ್ಕೆ ತೆರಳುತ್ತಿದ್ದ. ಕಾಸರಗೋಡಿನಿಂದ ಪುತ್ತೂರಿಗೆ ಆಗಮಿಸಿ ಬಳಿಕ ಬೆಂಗಳೂರಿಗೆ ತೆರಳಿ ತಲೆಮರೆಸಿಕೊಳ್ಳುವ ಯೋಜನೆ ರೂಪಿಸಿದ್ದ. 16 ಪ್ರಕರಣದಲ್ಲಿ ಇಲಾಖೆಗೆ ಬೇಕಾಗಿರುವ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ಕಲಿ ಯೊಗೀಶ ಹೊರದೇಶದಲ್ಲಿ ನೆಲೆಸಿರುವ ಸಾಧ್ಯತೆ ಇದೆ. ಈತ ಕಾಲಿಯಾ ರಫೀಕ್ ಮೂಲಕ ಇಬ್ಬರು ಯುವಕರನ್ನು ಬಳಸಿಕೊಂಡು ಪುತ್ತೂರಿನ ರಾಜಧಾನಿ ಜ್ಯುವೆಲ್ಲರಿಗೆ ಗುಂಡು ಹಾರಿಸಿದ್ದ. ಹೆದರಿಸುವ ಉದ್ದೇಶದಿಂದ ಗುಂಡು ಹಾರಿಸಲಾಗಿದೆಯೇ ಹೊರತು ಹತ್ಯೆ ಮಾಡುವ ಯೋಜನೆ ಇರಲಿಲ್ಲ. ಮೂರು ಗುಂಡು ಹಾರಿಸಿದ್ದು ಗೋಡೆ, ಶಟರ್ ಹಾಗೂ ಗಾಜಿಗೆ ತಗುಲಿದೆ. ಪುತ್ತೂರಿನ ರಾಜಧಾನಿ ಜ್ಯುವೆಲ್ಲರ್ಸ್‌ನಿಂದ 10 ಲಕ್ಷ ರೂ.ಗೆ ಬೇಡಿಕೆ ಇರಿಸಿದ್ದ. ಶೂಟೌಟ್ ನಡೆಸಲು ಅಬ್ದುಲ್ ಆಸಿರ್‌ನಿಗೆ 50 ಸಾವಿರ ರೂ. ನೀಡಲಾಗಿತ್ತು ಎಂದು ಮಾಹಿತಿ ಅವರು ನೀಡಿದರು.

2015ರ ಅಕ್ಟೋಬರ್ 6ರಂದು ರಾತ್ರಿ ಸುಮಾರು 7 ಗಂಟೆ ಹೊತ್ತಿಗೆ ಪುತ್ತೂರು ಮುಖ್ಯರಸ್ತೆಯ ರಾಜಧಾನಿ ಜ್ಯುವೆಲ್ಲರ್ಸ್‌ಗೆ ಮೂರು ಸುತ್ತಿನ ಗುಂಡು ಹಾರಿಸಲಾಗಿತ್ತು. ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಚಲಿಸುತ್ತಿದ್ದಾಗಲೇ ಗುಂಡು ಹಾರಿಸಿದ್ದರು. ಆಸುಪಾಸಿನಲ್ಲಿದ್ದವರು ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಮೊದಲೇ ದುಷ್ಕರ್ಮಿಗಳು ಪರಾರಿಯಾಗಿದ್ದರು. ಹತ್ಯೆ ಮಾಡುವ ಉದ್ದೇಶ ಇಲ್ಲದೇ ಇದ್ದರೂ ಜನನಿಬಿಡ ಪ್ರದೇಶವಾದ ಕಾರಣ ಜೀವಹಾನಿಯಾಗುವ ಸಾಧ್ಯತೆ ಇತ್ತು. ಮಳಿಗೆಯೊಳಗೆ ಸಿಬ್ಬಂದಿ ಇದ್ದರೂ ಜೀವಹಾನಿಯಾಗಿಲ್ಲ. ಬೈಕ್‌ನ ಹಿಂಬದಿ ಕುಳಿತಿದ್ದ ಕಪ್ಪು ಟೀ ಶರ್ಟ್ ಧರಿಸಿದ್ದ ವ್ಯಕ್ತಿ ಗುಂಡು ಹಾರಿಸಿದ್ದ. ಇಬ್ಬರು ಮುಖಕ್ಕೆ ಬಟ್ಟೆ ಸುತ್ತಿದ್ದರು ಎಂಬ ಮಾಹಿತಿಯಷ್ಟೇ ಸ್ಥಳೀಯರಿಂದ ತಿಳಿದುಬಂದಿತ್ತು.

ಪ್ರಶಂಸಾ ಪತ್ರ:

ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಿದ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್‌ಗೆ ಪ್ರಶಂಸಾ ಪತ್ರ ನೀಡಲಾಗುವುದು. ಪ್ರಮುಖ ಪ್ರಕರಣವಾದ ಕಾರಣ ನಗದು ಪಾರಿತೋಷಕ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದು ವಿನ್ಸೆಂಟ್ ಶಾಂತಕುಮಾರ್ ತಿಳಿಸಿದರು.

ಎಎಸ್ಪಿ ರಿಷ್ಯಂತ್, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News