ಮಣ್ಣಪಳ್ಳ ಕೆರೆಯ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

Update: 2016-04-01 18:22 GMT

 ಮಣಿಪಾಲ, ಎ.1: ಮಣಿಪಾಲ ಹಾಗೂ ಆಸುಪಾಸಿನ ಹಿರಿಯರು, ಮಹಿಳೆಯರು ಸೇರಿದಂತೆ ನಾಗರಿಕರ ವಿಹಾರ ತಾಣವಾಗಿರುವ ಮಣ್ಣಪಳ್ಳ ಕೆರೆಯ ಸುತ್ತಲೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಸುಮಾರು 1.32 ಕೋಟಿ ರೂ.ವೆಚ್ಚದಲ್ಲಿ ನಡೆಸಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಪ್ರಮೋದ್ ಮಧ್ವರಾಜ್ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಣ್ಣಿಪಳ್ಳ ಪರಿಸರದಲ್ಲಿ ಈಗ ಭಾರೀ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರಿಂದ ಇನ್ಯಾವುದೇ ಬೇಡಿಕೆ ಬಂದರೂ ಅವುಗಳನ್ನು ಈಡೇರಿಸಲಾಗುವುದು ಎಂದರು.
ಒಳಚರಂಡಿಗೆ 200 ಕೋಟಿ ರೂ.: ಮಣಿಪಾಲದೊಳಗಿನ ಎಲ್ಲ ರಸ್ತೆಗಳನ್ನು ಸುಮಾರು 7ಕೋಟಿ ರೂ.ವೆಚ್ಚದಲ್ಲಿ ದುರಸ್ತಿಪಡಿಸಲಾಗಿದೆ. ಇಲ್ಲಿನ ಅತೀ ದೊಡ್ಡ ಸಮಸ್ಯೆಯಾದ ಒಳಚರಂಡಿ ಕಾಮಗಾರಿಗೆ ಎಡಿಬಿ ಯೋಜನೆಯಡಿ 200 ಕೋಟಿ ರೂ.ಮಂಜೂರಾಗಿದ್ದು, ಡಿಪಿಆರ್ ಹಂತದಲ್ಲಿದೆ. ಇದರಿಂದ ಮಣಿಪಾಲವನ್ನೊಳಗೊಂಡ ಶಿವಳ್ಳಿ, ಪುತ್ತೂರು ಹಾಗೂ ಕೊಡವೂರು ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದರು.
ಎಡಿಬಿ ಯೋಜನೆಯಡಿ 300 ಕೋಟಿ ರೂ.ಮಂಜೂರಾಗಿದ್ದು, ಇದರಲ್ಲಿ 100 ಕೋಟಿ ರೂ.ಯೋಜನೆ ಕುಡಿಯುವ ನೀರಿಗಾಗಿ ಮೀಸಲಿರಿಸಲಾಗಿದೆ. ಇದರಡಿ ಸ್ವರ್ಣ ನದಿಗೆ ಸಿಮ್ರದಲ್ಲಿ ಇನ್ನೊಂದು ಅಣೆಕಟ್ಟು ಕಟ್ಟಿ ಅದರ ಮೂಲಕ ಉಡುಪಿ ನಗರಕ್ಕೆ ದಿನದ 24 ಗಂಟೆಯೂ ವರ್ಷವಿಡಿ ಕುಡಿಯುವ ನೀರನ್ನು ನೀಡುವ ಯೋಜನೆಯಿದೆ ಎಂದು ಪ್ರಮೋದ್ ಹೇಳಿದರು.
ಅಮೃತ ಯೋಜನೆಯಡಿ ದೊರೆಯುವ 100 ಕೋಟಿ ರೂ. ಅನುದಾನದಲ್ಲಿ 76 ಬಡಗುಬೆಟ್ಟು, ಹೆರ್ಗ ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೂಲಕ ಚುನಾವಣೆಗೆ ಮುನ್ನ ಬಿಡುಗಡೆಗೊಳಿಸಿದ ‘ವಿಷನ್ ಡಾಕ್ಯುಮೆಂಟ್’ನಲ್ಲಿ ಹೇಳಿದ ಹೆಚ್ಚಿನ ಸೌಲಭ್ಯವನ್ನು ತನ್ನ ಕ್ಷೇತ್ರಕ್ಕೆ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಜಿಪಂ ಸದಸ್ಯ ಜನಾರ್ದನ ತೋನ್ಸೆ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ಕುಮಾರಿ, ಪ್ರಾಧಿಕಾರದ ಆಯುಕ್ತ ಜನಾರ್ದನ, ಸ್ಥಳೀಯ ನಗರಸಭಾ ಸದಸ್ಯ ನರಸಿಂಹ ನಾಯಕ್, ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್‌ಕುಮಾರ್ ಉಪಸ್ಥಿತರಿದ್ದರು.
ಉಡುಪಿ ನಗರಸಭೆಯ ಪೌರಾಯುಕ್ತ ಡಿ.ಮಂಜುನಾಥಯ್ಯ ಕಾರ್ಯಕ್ರಮ ನಿರೂಪಿಸಿದರು.ಸುಮಾರು 99 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಮಣ್ಣಪಳ್ಳ ಕೆರೆ 66 ಎಕರೆಯಷ್ಟು ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಈ ಕೆರೆಯ ಸುತ್ತಲೂ ಇದೀಗ 47 ಲಕ್ಷರೂ.ವೆಚ್ಚದಲ್ಲಿ ಕಬ್ಬಿಣದ ತಡೆಬೇಲಿಯನ್ನು ನಿರ್ಮಿಸಿ ಅತಿಕ್ರಮವನ್ನು ತಡೆಯಲಾಗಿದೆ. ಅಲ್ಲದೆ ಕೆರೆಯ ಸುತ್ತಲೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಸ್ಟೈನ್‌ಲೆಸ್ ಸ್ಟೀಲ್ ಡಸ್ಟ್‌ಬಿನ್‌ಗಳನ್ನು ಅಳವಡಿಸಲಾಗಿದೆ. ಕೆರೆಯ ಸುತ್ತಲೂ ವಾಕಿಂಗ್ ಟ್ರಾಕ್‌ಗಳನ್ನು ನಿರ್ಮಿಸಲಾಗಿದೆ. ಮುಂಜಾನೆ ಹಾಗೂ ಸಂಜೆ ಭಾರೀ ಸಂಖ್ಯೆಯಲ್ಲಿ ವಾಕಿಂಗ್‌ಗೆ ಬರುವ ಮಣಿಪಾಲಿಗರ ಕೋರಿಕೆಯಂತೆ ಕೆರೆಯ ಸುತ್ತಲೂ ಸುಮಾರು 16 ಲಕ್ಷರೂ.ವೆಚ್ಚದಲ್ಲಿ 40ರಷ್ಟು ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News