ಇಂದಿನ ಕಾರ್ಯಕ್ರಮ
ಇಂದಿನಿಂದ ಯೆನೆಪೊಯ ಆಸ್ಪತ್ರೆಯಲ್ಲಿ ಆಟಿಸಂ ಜಾಗೃತಿ ಕಾರ್ಯಕ್ರಮ
ಮಂಗಳೂರು, ಎ.1: ದೇರಳಕಟ್ಟೆಯ ಯೆನೆಪೊಯ ಫಿಸಿಯೋ ಥೆರಪಿ ಕಾಲೇಜು ವತಿಯಿಂದ ವಿಶ್ವ ಸ್ವಲೀನತೆ(ಆಟಿಸಂ) ಜಾಗೃತಿ ಕಾರ್ಯಕ್ರಮ ಎ.2 ಮತ್ತು 3ರಂದು ಹಮ್ಮಿಕೊಳ್ಳಲಾಗಿದೆ ಎಂದು ಯೆನೆಪೊಯ ವಿವಿಯ ಕುಲಸಚಿವ ಡಾ.ರಘುವೀರ್ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಯೆನೆಪೊಯ ವಿವಿ, ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ ಕಾಲೇಜು ಹಾಗೂ ದಂತ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶಿಷ್ಟ ಮಕ್ಕಳಲ್ಲಿ ಕಂಡುಬರುವ ಸ್ವಲೀನತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಎ.2ರಂದು ದೇರಳಕಟ್ಟೆ ಯೆನೆಪೊಯ ಮೆಡಿಕಲ್ ಕಾಲೇಜಿನ ಆವರಣದಲ್ಲಿ ವೈದ್ಯಕೀಯ ವೃತ್ತಿಪರರು ಹಾಗೂ ವಿದ್ಯಾರ್ಥಿಗಳಿ ಗಾಗಿ ಕಾರ್ಯಕ್ರಮ ನಡೆಯಲಿದೆ. ಎ.3ರಂದು ಕೊಡಿಯಾಲ್ಬೈಲ್ನ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಸ್ವಲೀನತೆಗೊಳಪಟ್ಟ ಮಕ್ಕಳ ಪೋಷಕರು ಮತ್ತು ಶಾಲಾ ಶಿಕ್ಷಕರಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳಿಕ ತಜ್ಞರ ಸಮ್ಮುಖದಲ್ಲಿ ಅಧಿವೇಶನ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಚಿವ ಯು.ಟಿ.ಖಾದರ್ ಭಾಗವಹಿ ಸಲಿದ್ದಾರೆ. ಯೆನೆಪೊಯ ವಿವಿ ಕುಲಪತಿ ವೈ.ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ವಿವಿಯ ಸಹಪ್ರಾಧ್ಯಾಪಕರಾದ ಇಬ್ರಾಹೀಂ ಸಜ್ಜಾದ್, ಪ್ರೊ.ಪದ್ಮಕುಮಾರ್ ಉಪಸ್ಥಿತರಿದ್ದರು.
ಇಂದು ಥ್ರೋಬಾಲ್ ಪಂದ್ಯ
ಮಂಗಳೂರು, ಎ.1: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಂತರ್ ಕಾಲೇಜು ಸಂಗೀತ, ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟ ಎ.2ರಂದು ಬೆಳಗ್ಗೆ 9:30ರಿಂದ ಕಾಲೇಜಿನ ಆವರಣ ದಲ್ಲಿ ನಡೆಯಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಧರ್ಮಣ ನಾಯ್ಕಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿ ಸಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 5 ಗಂಟೆಗೆ ನಡೆಯಲಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ರಾಮ್ ಮೋಹನ್ ರೈ, ಖಾಯಂ ಜನತಾ ನ್ಯಾಯಾಲಯದ ಪ್ರಭಾರ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ನಿವೃತ್ತ ಎಸ್ಪಿ ಎಂ. ಗಣೇಶ್, ಜೊತೆ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು.
ಇಂದು ಮಂಗಳೂರಿಗೆ ಎ.ಪಿ.ಉಸ್ತಾದ್
ಮಂಗಳೂರು, ಎ.1: ಕಲ್ಲಿಕೋಟೆ ಮರ್ಕಝ್ ಶರೀಅ ಕಾಲೇಜಿನ ಕನ್ನಡ ವಿದ್ಯಾರ್ಥಿ ಸಂಘದ ಬೆಳ್ಳಿಹಬ್ಬದ ಅಂಗವಾಗಿ ಕರ್ನಾಟಕ ಸಖಾಫಿ ಕೌನ್ಸಿಲ್ನ ಸಹಯೋಗದೊಂದಿಗೆ ಎ.2ರಂದು ನಗರದ ಪುರಭವನದಲ್ಲಿ ಉಲಮಾ ಕಾನ್ಫರೆನ್ಸ್ ನಡೆಯಲಿದೆ.
ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.