ಸುಳ್ಯ: ಎ.12ರಿಂದ 17ರ ತನಕ ‘ಸಂಸ್ಕಾರವಾಹಿನಿ’ ಮಕ್ಕಳ ಬೇಸಿಗೆ ಶಿಬಿರ
ಸುಳ್ಯ: ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ಈ ವರ್ಷದ ‘ಸಂಸ್ಕಾರವಾಹಿನಿ’ ಮಕ್ಕಳ ಬೇಸಿಗೆ ಶಿಬಿರ ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನ ಆಂಜನೇಯ ಕ್ಷೇತ್ರದಲ್ಲಿ ಎ.12ರಿಂದ 17ರ ತನಕ ನಡೆಯಲಿದೆ.
ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ದೇವಸ್ಥಾನಗಳ ಸಂಸ್ಕಾರ ಕೊಡುವ ಕೇಂದ್ರಗಳು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ದೇವಸ್ಥಾನಗಳಲ್ಲಿ ಸಂಸ್ಕಾರವಾಹಿನಿ ಶಿಬಿರಗಳನ್ನು ನಡೆಸಲು ಪ್ರತಿಷ್ಠಾನ ನಿರ್ಣಯ ಕೈಗೊಂಡಿದೆ. ಈ ಬಾರಿ ಅಡ್ಕಾರಿನ ಅಂಜನಾದ್ರಿಯಲ್ಲಿ ಶಿಬಿರ ನಡೆಯಲಿದ್ದು, ಆ ಭಾಗದ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಶಿಬಿರದ ಸಂಚಾಲಕಿ ವಿನಯ ಆರ್ ನಾಕ್ ಮಾತನಾಡಿ, 5ನೇ ತರಗತಿಯಿಮದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಮಕ್ಕಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುವ ಮೂಲಕ ಭಾರತೀಯ ಸಂಸ್ಕಾರ, ಸಂಸ್ಕೃತಿ, ಸಭ್ಯತೆಗಳನ್ನು ಉಳಿಸಿ ಬೆಳೆಸುವುದು, ಸಂಸ್ಕೃತ ಶ್ಲೋಕಗಳು,ಸೃಜನಾತ್ಮಕ ಕೆಲಗಳು, ಚಿತ್ರಕಲೆ, ಜಾದೂ, ಬೊಂಬೆ ತಯಾರಿ ಇತ್ಯಾದಿಗಳೊಂದಿಗೆ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಂಬಂದಿಸಿದ ಕಥೆಗಳು, ಉಪನ್ಯಾಸಗಳನ್ನು ನೀಡಲಾಗುತ್ತದೆ ಎಂದರು.
ಶಿಬಿರದ ಸಹ ಸಂಚಾಲಕಿ ಸನ್ನುತಾ ಎಸ್ ರೈ ಕಾರ್ಯಕ್ರಮಗಳ ವಿವರ ನೀಡಿದರು. ಶಿಬಿರ ಹಿರಿಯ ವಿದ್ಯಾರ್ಥಿಗಳಾದ ಶ್ರಾವ್ಯ ಅಡ್ಕಾರು, ಅನುಷ್ಕಾ ರಾವ್ ದೇ, ಕೆ.ಎಸ್.ಹರ್ಷಿಣಿ ಶಿಬಿರ್ನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಪ್ರಾಂಶುಪಾಲೆ ಡಾ.ಯಶೋದಾ ರಾಮಚಂದ್ರ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ದೇವಸ್ಥಾನದ ಆಡಳಿತ ಧರ್ಮದರ್ಶಿ ಶಿವರಾಮ ರೈ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಪಂಚಾಯತ್ ಸದಸ್ಯ ತೀರ್ಥರಾಮ ಜಾಲ್ಸೂರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು. ಶ್ರೀದೇವಿ ನಾಗರಾಜ ಭಟ್, ರವಿಪ್ರಸಾದ್ ನಾಕ್ ಕಜೆಗದ್ದೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.