ಪುತ್ತೂರು: ಹೈಕೋರ್ಟ್ ಆದೇಶದಂತೆ ಡಿ.ಸಿ.ಇಬ್ರಾಹೀಂ ಹೆಸರಿಲ್ಲದ ಹೊಸ ಆಮಂತ್ರಣ ಪತ್ರಿಕೆ ಮರುಮುದ್ರಣ
ಪುತ್ತೂರು: ಜಿಲ್ಲಾಧಿಕಾರಿಗಳ ಹೆಸರು ಮುದ್ರಣಗೊಳಿಸಿದ್ದರಿಂದ ಕಳೆದ ಕೆಲವು ದಿನಗಳಿಂದ ಹಲವು ಗೊಂದಲಗಳಿಗೆ ಕಾರಣವಾಗಿದ್ದ ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವದ ಆಮತ್ರಂಣ ಪತ್ರಿಕೆಯನ್ನು ಅಧಿಕಾರಿಗಳ ಹೆಸರು ಅಳಿಸಿ ಮರುಮುದ್ರಣ ಮಾಡಲಾಗಿದೆ.
ಆಮಂತ್ರಣ ಪತ್ರದಲ್ಲಿ ಹಿಂದೂಯೇತರ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ ಹೆಸರನ್ನು ಮುದ್ರಿಸಿರುವುದರ ವಿರುದ್ದ ಭಕ್ತರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟು ಜಿಲ್ಲಾಧಿಕಾರಿಗಳ ಹೆಸರನ್ನು ಅಳಿಸಿ ಮರುಮುದ್ರಣ ಮಾಡುವಂತೆ ಆದೇಶ ನೀಡಿತ್ತು. ಇದೀಗ ಆಮಂತ್ರಣ ಪತ್ರಿಕೆ ಮರುಮುದ್ರಣಗೊಂಡಿದೆ. ಹಿಂದಿನ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೆಸರು ಸಹಿತ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಆರ್.ಆರ್. ಜನ್ನು, ದೇವಳದ ಆಡಳಿತಾಧಿಕಾರಿ ಜಗದೀಶ್ ಎಸ್ ಮತ್ತು ಕಾರ್ಯನಿರ್ವಹಣಾಧಿಕಾರಿ ಎಂ.ಎಚ್.ರವೀಂದ್ರ ಅವರ ಹೆಸರು ಮುದ್ರಿಸಲಾಗಿತ್ತು. ಈ ಪೈಕಿ ಹಿಂದೂಯೇತರ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಹೆಸರನ್ನು ಕೈಬಿಡಬೇಕು ಹಾಗೂ ಆಮಂತ್ರಣ ಪತ್ರಿಕೆಯನ್ನು ಮುರುಮುದ್ರಿಸಬೇಕು ಎಂದು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಜಿಲ್ಲಾಧಿಕಾರಿ ಹೆಸರನ್ನು ಅಳಿಸಿ ಮರುಮುದ್ರಿಸುವಂತೆ ಆದೇಶ ನೀಡಿತ್ತು. ಎ.1ರಂದು ಆಮಂತ್ರಣ ಪತ್ರಿಕೆ ಮರುಮುದ್ರಿಸಲಾಗಿದ್ದು, ಆಯುಕ್ತರು, ಜಿಲ್ಲಾಧಿಕಾರಿಗಳ ಹೆಸರು ಸಹಿತ ಎಲ್ಲರ ಹೆಸರನ್ನು ವಿರಹಿತಗೊಳಿಸಲಾಗಿದೆ ಹಾಗೂ ಬದಲಿಗೆ ಆಡಳಿತಾಧಿಕಾರಿಗಳು, ಕಾರ್ಯನಿರ್ವಹಣಾಧಿಕಾರಿಗಳು, ತಂತ್ರಿಗಳು, ಅರ್ಚಕರು, ನೌಕರ ವೃಂದ ಹಾಗೂ ಊರಿನ ಸಮಸ್ತರು ಎಂದು ಮುದ್ರಿಸಲಾಗಿದೆ.