ಪ್ಲಾಸ್ಟಿಕ್ ನಿಷೇಧ: ಉತ್ಪಾದನಾ ಘಟಕಗಳಿಗೆ ನಷ್ಟದ ಭೀತಿ

Update: 2016-04-02 18:48 GMT

 ಜೀವನಾಧಾರ ಕಳೆದುಕೊಳ್ಳಲಿರುವ ಲಕ್ಷಾಂತರ ಕಾರ್ಮಿಕರು
ದೈನಂದಿನ ಜನಜೀವನದ ಮೇಲೂ ಪರಿಣಾಮ

ಮಂಗಳೂರು, ಎ.2: ರಾಜ್ಯವನ್ನು ಪ್ಲಾಸ್ಟಿಕ್‌ಮುಕ್ತವನ್ನಾಗಿಸಲು ಪಣತೊಟ್ಟಿರುವ ಸರಕಾರ ಎ.15ರಿಂದ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿರುವುದು ಪರಿಸರದ ದೃಷ್ಟಿಯಿಂದ ಉತ್ತಮ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಆದರೆ ಈ ಆದೇಶ ರಾಜ್ಯದ 750 ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತಯಾರಿಕಾ ಸಂಸ್ಥೆಗಳ ಮೇಲೆ, ಪ್ಲಾಸ್ಟಿಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿರುವ ಸುಮಾರು 1.8 ಲಕ್ಷ ಕಾರ್ಮಿಕರ ಉದ್ಯೋಗದ ಮೇಲೂ ದುಷ್ಪರಿಣಾಮ ಬೀರಲಿದೆ ಎಂಬುದೂ ಅಷ್ಟೇ ಸತ್ಯ.
  ರಾಜ್ಯ ಸರಕಾರ 2016ರ ಮಾ.11ರಂದು ಮಾಡಿದ ನೋಟಿಫಿಕೇಶನ್ ಪ್ರಕಾರ ರಾಜ್ಯದಲ್ಲಿ ಎಲ್ಲ ಬಗೆಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸಿದೆ. ಜನರು ದಿನಬಳಕೆಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಳಸುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳೂ ಈ ನಿಷೇಧ ವ್ಯಾಪ್ತಿಗೆ ಬರುತ್ತವೆ. ಆದರೆ ಈ ನಿಷೇಧ ಅವೈಜ್ಞಾನಿಕ ಎಂಬುದು ಪ್ಲಾಸ್ಟಿಕ್ ಉತ್ಪಾದಕರ ಅಭಿಪ್ರಾಯ. ಈ ಹಿಂದೆ 20 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿತ್ತು. ಬಳಿಕ ಇದನ್ನು 40 ಮೈಕ್ರಾನ್‌ನಷ್ಟಿರಬೇಕು ಎಂದು ಪರಿಷ್ಕರಿಸಲಾಗಿತ್ತು. ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್‌ಮೆಂಟ್ ರೂಲ್ಸ್ ಪ್ರಕಾರ 40 ಮೈಕ್ರಾನ್‌ನಷ್ಟಿರಬೇಕು ಎಂದು ಕೇಂದ್ರ ಸರಕಾರ ನಿಯಮ ರೂಪಿಸಿದ್ದರೂ ರಾಜ್ಯ ಸರಕಾರ ಇದನ್ನು ಪರಿಗಣಿಸದೆ ಎಲ್ಲ ಬಗೆಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸುತ್ತಿರುವುದು ಸರಿಯಲ್ಲ ಎಂದು ಪ್ಲಾಸ್ಟಿಕ್ ಉತ್ಪಾದಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದಲ್ಲಿ 750 ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತಯಾರಕ ಉತ್ಪದಾನ ಸಂಸ್ಥೆಗಳಿವೆ. ಇವುಗಳಿಗೆ ರಾಜ್ಯ ಸರಕಾರ 2018ರವರೆಗೆ ಸಬ್ಸಿಡಿಯೊಂದಿಗೆ ಪರ ವಾನಿಗೆಯನ್ನು ನೀಡಿದೆ. ಆದರೆ ಈ ಉತ್ಪಾದನಾ ಸಂಸ್ಥೆಗಾಗಿ ಮಾಡಿರುವ ಸಾಲ ಇನ್ನೂ ತೀರಿಲ್ಲ. ಇವೆಲ್ಲಾ ಗೊತ್ತಿದ್ದರೂ ರಾಜ್ಯ ಸರಕಾರ ಏಕಾಏಕಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
    ದ.ಕ. ಜಿಲ್ಲೆಯಲ್ಲಿ 52 ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಉತ್ಪಾದನಾ ಘಟಕಗಳಿವೆ. ಈ ಉದ್ಯಮದಲ್ಲಿ ಸುಮಾರು 50 ಮಂದಿ ಉದ್ಯಮಿಗಳು ತೊಡಗಿಸಿಕೊಂಡಿದ್ದು, ಐದು ಸಾವಿರ ಕಾರ್ಮಿಕರು ದುಡಿಯುತ್ತಿದ್ದಾರೆ. ಹತ್ತು ಸಾವಿರ ಮಾರಾಟಗಾರರಿದ್ದಾರೆ. ಜಿಲ್ಲೆಯಲ್ಲಿ 1 ಲಕ್ಷ ಜನ ಪ್ಲಾಸ್ಟಿಕ್ ಉತ್ಪನ್ನ ಘಟಕಗಳ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ 80 ಸಾವಿರ ಉದ್ಯೋಗಿಗಳಿದ್ದು, 1 ಲಕ್ಷ ಜನರು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 5 ಲಕ್ಷ ಮಂದಿ ಈ ಉದ್ಯಮದ ಅವಲಂಬಿತರಾಗಿದ್ದಾರೆ.
 ಮೀನು, ಮಾಂಸ, ತರಕಾರಿಗಳನ್ನು ಕೊಂಡೊಯ್ಯಲು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅತ್ಯಗತ್ಯ ಎಂಬಂತಹ ಅನಿವಾರ್ಯ ಪರಿಸ್ಥಿತಿಯಿದ್ದು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧ ಜನಸಾಮಾನ್ಯರಿಗೂ ಸಮಸ್ಯೆಯನ್ನು ಸೃಷ್ಟಿಸಿದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ರಾಜ್ಯ ಸರಕಾರದಲ್ಲಿ ಕರಡು ನೋಟಿಫಿಕೇಶನ್ ಬಂದ ಸಂದರ್ಭದಲ್ಲೇ ಕೆನರಾ ಪ್ಲಾಸ್ಟಿಕ್ ಮ್ಯಾನ್ಯುಫ್ಯಾಕ್ಚರರ್ ಆ್ಯಂಡ್ ಟ್ರೇಡರ್ಸ್‌ ಅಸೋಸಿಯೇಶನ್ ಮತ್ತು ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಶನ್ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದರೂ ರಾಜ್ಯ ಸರಕಾರ ಎಲ್ಲ ವಿಧದ ಪ್ಲಾಸ್ಟಿಕ್‌ಗಳಿಗೆ ವಿಧಿಸಿರುವ ನಿಷೇಧವನ್ನು ಹಿಂಪಡೆದಿಲ್ಲ. 40 ಮೈಕ್ರಾನ್‌ಗಿಂತ ಕಡಿಮೆಯಿರುವುದಕ್ಕೆ ಮಾತ್ರ ನಿಷೇಧ ಹೇರುವುದಾಗಿ ಕಾನೂನು ಸಚಿವರು ಸೇರಿದಂತೆ ಹಲವರು ಭರವಸೆ ನೀಡಿದ್ದರೂ ಅದು ಈಡೇರಿಲ್ಲವೆಂಬುದು ಉತ್ಪಾದಕರ ಅಳಲು.

ಸುಪ್ರೀಂ ಕೋರ್ಟ್ ಅಥವಾ ಗ್ರೀನ್ ಟ್ರಿಬ್ಯುನಲ್‌ನಲ್ಲಿ ಪ್ರಶ್ನಿಸಲು ಚಿಂತನೆ
ಪ್ಲಾಸ್ಟಿಕ್ ನಿಷೇಧದಿಂದ ಉದ್ಯಮಗಳು ಬಂದ್ ಆಗಿರುವುದರಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಕಾನೂನು ಮೊರೆ ಹೋಗಲು ಪ್ಲಾಸ್ಟಿಕ್ ಉತ್ಪನ್ನಗಳ ತಯಾ ರಕರು ನಿರ್ಧರಿಸಿದ್ದಾರೆ. ರಾಜ್ಯ ಸರಕಾರ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಮೇಲೆ ನಿಷೇಧವನ್ನು ಹೇರಿರುವುದರ ವಿರುದ್ಧ ಈಗಾಗಲೇ ಕೆನರಾ ಪ್ಲಾಸ್ಟಿಕ್ ಮ್ಯಾನ್ಯುಫ್ಯಾಕ್ಚರರ್ ಆ್ಯಂಡ್ ಟ್ರೇಡರ್ ಅಸೋಸಿಯೇಶನ್ ಮತ್ತು ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಶನ್ ಹೈಕೋರ್ಟ್ ಮೆಟ್ಟಿಲೇರಿದೆ. ಆದರೆ ಹೈಕೋರ್ಟ್ ಈ ಬಗ್ಗೆ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ಪ್ರಶ್ನಿಸಲು ಸೂಚಿಸಿದೆ. ಅದರಂತೆ ಗ್ರೀನ್ ಟ್ರಿಬ್ಯೂನಲ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಈ ಆದೇಶದ ವಿರುದ್ಧ ಪ್ರಶ್ನಿಸಲು ಚಿಂತನೆ ನಡೆಯುತ್ತಿದೆ. ಅದಕ್ಕೂ ಮುಂಚೆ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಪರಿಹಾರ ಸಾಧ್ಯವೆ ಎಂಬ ನಿಟ್ಟಿನಲ್ಲೂ ಚರ್ಚೆಗಳು ನಡೆಯುತ್ತಿವೆ.

ಪ್ಲಾಸ್ಟಿಕ್ ವೇಸ್ಟ್ ಸಂಗ್ರಹ ಕೇಂದ್ರ
 ಮಂಗಳೂರಿನಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತಯಾರಕ ಸಂಸ್ಥೆಯವರು ಒಗ್ಗೂಡಿ 2 ಲಕ್ಷ ರೂ. ಖರ್ಚು ಮಾಡಿ ಪ್ಲಾಸ್ಟಿಕ್ ವೇಸ್ಟ್ ಕಲೆಕ್ಷನ್ ಸೆಂಟರನ್ನು ಕದ್ರಿ ಮಾರ್ಕೆಟ್ ನಲ್ಲಿ ತೆರೆದಿದ್ದಾರೆ. ಹಳೆಯ ಪ್ಲಾಸ್ಟಿಕನ್ನು ಗ್ರಾಹಕರಿಂದ ಖರೀದಿಸುವ ಈ ಕೇಂದ್ರ ದಲ್ಲಿ ಸಾಕಷ್ಟು ಹಳೆಯ ಪ್ಲಾಸ್ಟಿಕ್ ಸಂಗ್ರಹವಾಗುತ್ತಿವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಇದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯೂ ಆಗಿದೆ. ಇಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಪುನರ್ಬಳಕೆಯನ್ನು ಮಾಡಲಾಗುತ್ತಿ ರುವುದರಿಂದ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆಯಾಗಿದೆ ಎಂದು ಪ್ಲಾಸ್ಟಿಕ್ ತಯಾರಕರು ಹೇಳುತ್ತಾರೆ.


ಉತ್ಪಾದಕರ ನಷ್ಟ-ಕಾರ್ಮಿಕರ ಉದ್ಯೋಗಕ್ಕೆ ಪರ್ಯಾಯ ವ್ಯವಸ್ಥೆಗೆ ಚಿಂತನೆ: ಸಚಿವ ರೈ ಕ್ಯಾಬಿನೆಟ್‌ನಲ್ಲಿ ತೀರ್ಮಾನವಾಗಿರುವಂತೆ ಎಲ್ಲ್ಲ ಬಗೆಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆ ಯಲ್ಲಿ 40 ಮೈಕ್ರಾನ್‌ಗಿಂತ ಅಧಿಕ ಗುಣಮಟ್ಟದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಿಗೆ ಅನುಮತಿ ನೀಡುವ ಬಗ್ಗೆ ನಾನು ವೈಯಕ್ತಿವಾಗಿ ತೀರ್ಮಾನಿಸಲು ಸಾಧ್ಯವಿಲ್ಲ. ಆದರೂ ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುತ್ತೇನೆ. ಉತ್ಪಾದಕರಿಗೆ ಆಗುವ ನಷ್ಟ ಮತ್ತು ಕಾರ್ಮಿಕರ ಉದ್ಯೋಗಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು.

 -ಬಿ.ರಮಾನಾಥ ರೈ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ


ದೇಶದಲೆಲ್ಲೂ ಈ ರೀತಿಯಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಿಗೆ ನಿಷೇಧ ಹೇರಲಾಗಿಲ್ಲ. ಕೇಂದ್ರ ಸರಕಾರದ ನಿಯಮವನ್ನು ಮೀರಿ ರಾಜ್ಯ ಸರಕಾರ 40 ಮೈಕ್ರಾನ್ ಇರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸಿದೆ. ಇದರಿಂದ ರಾಜ್ಯದಲ್ಲಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತಯಾರಿಕಾ ಸಂಸ್ಥೆಗಳು ಮುಚ್ಚಿ ಹೊರರಾಜ್ಯದ ಪ್ಲಾಸ್ಟಿಕ್ ಉತ್ಪನ್ನ ಸಂಸ್ಥೆಗಳು ಬಂದು ಮಾರಾಟ ಮಾಡುವ ಸಾಧ್ಯತೆಯಿದೆ. ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ದಿಂದ ಆಗುವ ನಷ್ಟಕ್ಕೆ, ಕಾರ್ಮಿಕರ ಉದ್ಯೋಗಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಸರಕಾರ ಕಾನೂನನ್ನು ಜಾರಿಗೊಳಿಸುತ್ತಿದೆ.
-ಬಿ.ಎ.ನಝೀರ್, ಅಧ್ಯಕ್ಷರು, ಕೆನರಾ ಪ್ಲಾಸ್ಟಿಕ್ ಮ್ಯಾನ್ಯುಫ್ಯಾಕ್ಚರ್ ಆ್ಯಂಡ್ ಟ್ರೇಡರ್ಸ್‌ ಅಸೋಸಿಯೇಶನ್

Writer - ವಿನೋದ್ ಪುದು

contributor

Editor - ವಿನೋದ್ ಪುದು

contributor

Similar News