ಮೂಡುಬಿದಿರೆ: ತೆಂಕಮಿಜಾರಿನಲ್ಲಿ ಸಾರ್ವಜನಿಕ ರುದ್ರಭೂಮಿ "ಮೋಕ್ಷಧಾಮ" ಲೋಕಾರ್ಪಣೆ
ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾ0ುತ್ ವ್ಯಾಪ್ತಿ0ು ಬಡಗಮಿಜಾರು ಗ್ರಾಮದ ಅಶ್ವತ್ಥಪುರದಲ್ಲಿ 16ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಸಾರ್ವಜನಿಕ ರುದ್ರಭೂಮಿ "ಮೋಕ್ಷಧಾಮ"ವನ್ನು ಸಚಿವ ಅಭಯ ಚಂದ್ರ ಜೈನ್ ಅವರು ಭಾನುವಾರ ಲೋಕಾರ್ಪಣೆಗೈದರು. ನಂತರ ಮಾತನಾಡಿದ ಸಚಿವರು ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ತೆಂಕಮಿಜಾರು ಗ್ರಾಮ ಪಂಚಾಯತ್ ಇತರ ಗ್ರಾ.ಪಂಗಳಿಗೆ ಮಾದರಿಯಾಗಿದೆ. ಇದೀಗ ಸಾರ್ವಜನಿಕರ ಸೇವೆಗೆ ಅಶ್ವತ್ಥಪುರದಲ್ಲಿ ತೆರೆದುಕೊಂಡಿರುವ ರುದ್ರಭೂಮಿ "ಮೋಕ್ಷ ಧಾಮ"ವು ಸುಸಜ್ಜಿತವಾಗಿದೆ. ರುದ್ರಭೂಮಿಯಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಇದಲ್ಲದೆ ಇನ್ನೂ ಎರಡು ರುದ್ರಭೂಮಿಗಳು ನಿರ್ಮಾಣ ಹಂತದಲ್ಲಿರುವುದು ಶ್ಲಾಘನೀಯ ಎಂದು ಹೇಳಿದ ಅವರು ರುದ್ರಭೂಮಿಯ ಸುತ್ತ ಮುತ್ತ ಗಿಡಗಳನ್ನು ಬೆಳೆಸಿ ಹಸುರುಮಯಗೊಳಿಸಬೇಕೆಂದರು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ ಸುಚ್ಚರಿತ ಶೆಟ್ಟಿ ಮಾತನಾಡಿ, ರುದ್ರಭೂಮಿ ಎನ್ನುವಂತಹದ್ದು ಶಿವ ನೆಲೆಸಿರುವಂತಹ ಭೂಮಿ. ಈ ರುದ್ರಭೂಮಿಯಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಕೊಡಲಾಗುತ್ತದೆ. ಸುತ್ತಮುತ್ತಲಿನ ಇತರ ಗ್ರಾಮ ಪಂಚಾಯತ್ಗಳು ರುದ್ರಭೂಮಿಗೆ ಜಾಗ ಕಾದಿರಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ತೆಂಕಮಿಜಾರು ಗ್ರಾ.ಪಂಚಾಯತ್ ತಮ್ಮ ವ್ಯಾಪ್ತಿಯಲ್ಲಿ "ಶಾಂತಿಧಾಮ", "ಮುಕ್ತಿಧಾಮ" ಎಂಬ ಒಟ್ಟು ಮೂರು ರುದ್ರಭೂಮಿಗಳನ್ನು ನಿರ್ಮಾಣ ಮಾಡಲು ಹೊರಟಿರುವುದು ಪ್ರಶಂಸನೀಯ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿ ಮಳೆಗಾಲ ಆರಂಭವಾಗುವುದರೊಳಗೆ ಇನ್ನೆರಡು ರುದ್ರಭೂಮಿಗಳನ್ನು ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಸೇವೆಗೆ ನೀಡಲಾಗುವುದು. ರುದ್ರಭೂಮಿಗೆ ಜಾಗ ನೀಡಿರುವವರಿಗೆ ಕೃತಜ್ಞತೆ ಸಲ್ಲಿಸಿದರು.
ತಾಲ್ಲೂಕು ಪಂಚಾಯತ್ ಸದಸ್ಯ ಪ್ರಕಾಶ ಗೌಡ, ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಎಲ್.ಭಟ್, ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಶೆಟ್ಟಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಸ್ವಾಗತಿಸಿದರು. ಸಮಿತಿಯ ಗೌರವಾಧ್ಯಕ್ಷ ದಿನೇಶ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಚೈತನ್ಯ ವಂದಿಸಿದರು.