ಪುತ್ತೂರು: ಕಟಕಟೆಯಿಂದ ಹಾರಿ ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿ

Update: 2016-04-05 12:01 GMT

ಪುತ್ತೂರು: ನ್ಯಾಯಾಲಯದಲ್ಲಿ ಆರೋಪಿಯೊಬ್ಬನ ವಿಚಾರಣೆ ವೇಳೆಯಲ್ಲಿ ಕಟಕಟೆಯಿಂದ ಹಾರಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಘಟನೆ ಮಂಗಳವಾರ ಪುತ್ತೂರು ನ್ಯಾಯಾಲಯದಲ್ಲಿ ನಡೆಯಿತು. ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ 2008 ರಲ್ಲಿ ಗೃಹಿಣಿ ಸೌಮ್ಯ ಮತ್ತು ಆಕೆಯ ಗಂಡು ಮಗು ಜಿಷ್ಣುವನ್ನು ಕೊಲೆ ಗೈದ ಪ್ರಕರಣದ ಆರೋಪಿ ಜಯೇಶ್ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ. ಆರೋಪಿ ಜಯೇಶ್‌ನನ್ನು ಮಂಗಳೂರು ಕಾರಾಗೃಹದಿಂದ ಪುತ್ತೂರು ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ತನಿಖೆಗೆ ಕರೆ ತರಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಆರೋಪಿಗಳು ನಿಲ್ಲುವ ಕಟಕಟೆಯನ್ನು ಹಾರಿ ಓಡಿಹೋಗಿದ್ದ. ಆದರೆ ಆತನನ್ನು ಪುತ್ತೂರು ಮಿನಿ ವಿಧಾನ ಸೌಧದ ಬಳಿ ನ್ಯಾಯವಾದಿಯೊಬ್ಬರು ಹಿಡಿದು ಬಳಿಕ ಸಾರ್ವಜನಿಕರು ಸೇರಿ ನ್ಯಾಯಾಲಯಕ್ಕೆ ಕರೆ ಮತ್ತೆ ಕರೆದು ತಂದರು. ಈತ ತಾಯಿ ಮತ್ತು ಮಗುವಿನ ಕೊಲೆಗೈದು ಇಲ್ಲಿಂದ ಕೇರಳಕ್ಕೆ ಪರಾರಿಯಾಗಿದ್ದನು.

2014 ರಲ್ಲಿ ಕೇರಳದ ಮೂವಾಟ್ಟುಪುರಂ ಸಮೀಪ ಈತ ಆಕಸ್ಮಿಕವಾಗಿ ಕೇರಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದನು. ಅಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಆರೋಪಿ ಜಯೇಶ್ ಪತ್ನಿಯೊಂದಿಗೆ ಜಗಳವಾಡಿ ತೆಂಗಿನ ಮರ ಹತ್ತಿ ಕುಳಿತಿದ್ದನು. ಸ್ಥಳೀಯ ಪೊಲೀಸರು ಈತನನ್ನು ಕೆಳಗಿಳಿಸಿ ಠಾಣೆಗೆ ಕರೆ ತಂದು ವಿಚಾರಣೆ ಮಾಡಿದಾಗ ಈತ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಎಂದು ತಿಳಿದು ಬಂದಿತ್ತು. ಉಪ್ಪಿನಂಗಡಿ ಪೊಲೀಸರು ಈತನನ್ನು ಅಲ್ಲಿಂದ ಬಂಧಿಸಿ ಕರೆ ತಂದಿದ್ದರು. ಕಳೆದ ಎರಡು ವರ್ಷಗಳಿಂದ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನನ್ನು ಮಂಗಳವಾರ ತನಿಖೆಗೆ ಕರೆ ತಂದಾಗ ಕಟಕಟೆಯಿಂದ ಹಾರಿ ಓಡಿ ಪರಾರಿಯಾಗಲು ವಿಫಲ ಯತ್ನ ನಡೆಸಿದ್ದಾನೆ. ಈತ ತನ್ನನ್ನು ಹಿಡಿದ ಸಾರ್ವಜನಿಕರಿಗೆ ಧಮ್ಕಿ ಹಾಕಿದ್ದಾನೆ. ಕಟಕಟೆಯ ತೆರೆದ ಭಾಗದಲ್ಲಿ ಪೊಲೀಸರು ನಿಂತಿರುತ್ತಾರೆ. ಈ ಕಾರಣದಿಂದ ಈತ ಕಟಕಟೆ ಹಾರಿ ತಪ್ಪಿಸಲು ಯತ್ನಿಸಿದನು. ಪುತ್ತೂರು ನ್ಯಾಯಾಲಯದಿಂದ ಬಂದ ಮಾಹಿತಿ ಮತ್ತು ಈತನನ್ನು ಜಿಲ್ಲಾ ಕಾರಾಗೃಹದಿಂದ ಪುತ್ತೂರಿಗೆ ಕರೆ ತಂದ ಪೊಲೀಸರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಜಯೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಈತ ಮಂಗಳವಾರ ಬೆಳಗ್ಗೆ ಕಾರಾಗೃಹದಿಂದ ಪುತ್ತೂರಿಗೆ ಕರೆ ತರುವಾಗಲೇ ಓಡಿ ಪರಾರಿಯಾಗುವ ಸಿದ್ಧತೆಯನ್ನು ಮಾಡಿದ್ದನು ಎನ್ನಲಾಗಿದ್ದು, ನ್ಯಾಯಾಲಯದಲ್ಲಿ ಈತನ ವಿರುದ್ಧದ ಕೊಲೆ ಪ್ರಕರಣದ ಸಾಕ್ಷಿಯ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲರ ಗಮನ ಸಾಕ್ಷಿ ವಿಚಾರಣೆಯತ್ತ ಇರುವ ಸಂದರ್ಭವನ್ನು ಗಮನಿಸಿ ಪರಾರಿಯಾಗಲು ಯತ್ನಿಸಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News