ಸುಳ್ಯ: ವೇದ ಶಿಬಿರಕ್ಕೆ ‘ಎಂಟ್ರೆನ್ಸ್ ಎಕ್ಸಾಮ್’ !
ಸುಳ್ಯ: ಸುಳ್ಯದ ಶ್ರೀಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ವೇದ ಯೋಗ ಕಲಾ ಶಿಬಿರಕ್ಕೆ ‘ಎಂಟ್ರೆನ್ಸ್ ಎಕ್ಸಾಮ್’ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು. ಸಾಮಾಜಿಕ ಕಾರ್ಯಕರ್ತ ಶ್ಯಾಮಸುದರ್ಶನ ಭಟ್ ಹೊಸಮೂಲೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತೀ ವರ್ಷದಂತೆ ನೂರಕ್ಕಿಂತಲೂ ಮಿಕ್ಕಿ ಅರ್ಜಿಗಳು ಬಂದಿದ್ದು ಮೂವತ್ತು ಹೊಸ ಶಿಬಿರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಹಾಗೂ ಹಿಂದಿನ ವರ್ಷದ ಎರಡು ತರಗತಿಗಳ ಮತ್ತು ಋಗ್ವೇದ ತರಗತಿಗಳ 70 ಶಿಬಿರಾರ್ಥಿಗಳು ಸೇರಿ ಒಟ್ಟು 100 ಜನ ಶಿಬಿರಾರ್ಥಿಗಳಿಗೆ ಉಚಿತವಾಗಿ ಊಟ ಉಪಹಾರ, ಪಾಠ ಪ್ರವಚನ, ವಸ್ತ್ರಉತ್ತರೀಯ ಪಠ್ಯ ಪುಸ್ತಕಗಳನ್ನು ನೀಡಿ ವೇದ ಯೋಗ ಕಲಾ ಪ್ರಕಾರಗಳ ಶಿಕ್ಷಣವನ್ನು ರಾಜ್ಯದ ವೇದ ವಿದ್ವಾಂಸರಿಂದ ಹಾಗೂ ವಿವಿಧ ಕಲಾ ಸಂಪನ್ಮೂಲ ವ್ಯಕ್ತಿಗಳಿಂದ ಮೂವತ್ತೈದು ದಿನಗಳ ಪರ್ಯಂತ ನಡೆಸಲಾಗುವುದು ಎಂದರು. ಪ್ರಕಾಶ್ ಭಟ್ ಮಣಿಪಾಲ, ಶ್ರೀದೇವಿ ನಾಗರಾಜ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಭಟ್ ಕೆ.ಯಸ್. ಬೆಂಗಳೂರು, ರಾಜೇಶ್ ಕೆ.ಯಸ್. ಬೆಂಗಳೂರು ಸಹಕರಿಸಿದರು.