ಉಡುಪಿ: ಮತ್ತೆ ಎರಡು ಸರಕಾರಿ ಕ್ವಾರ್ಟರ್ಸ್ಗಳಲ್ಲಿ ಕಳವು
ಉಡುಪಿ, ಎ.6: ಇಲ್ಲಿನ ಅಜ್ಜರಕಾಡಿನಲ್ಲಿ ನಿನ್ನೆ ಮೂರು ಸರಕಾರಿ ವಸತಿಗೃಹಗಳಿಗೆ ಕಳ್ಳರು ನುಗ್ಗಿರುವ ಬಗ್ಗೆ ವರದಿಯಾಗಿದ್ದು, ಇದೀಗ ಮತ್ತೆ ಎರಡು ವಸತಿ ಗೃಹಗಳಲ್ಲಿ ಕಳ್ಳತನ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.
ಅಬಕಾರಿ ನಿರೀಕ್ಷಕ ಧರ್ಮಪ್ಪಕೆ.ಟಿ. ಎಂಬವರು ಎ.2ರಂದು ಸಂಬಂಧಿಕರ ಮದುವೆ ನಿಮಿತ್ತ ಸಾಗರಕ್ಕೆ ತೆರಳಿದ್ದ ವೇಳೆ ಎ.4ರಂದು ರಾತ್ರಿ ವೇಳೆ ವಸತಿ ಗೃಹಕ್ಕೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಬೆಳ್ಳಿಯ ಚೆಂಬು, ಹರಿವಾಣ, ಪೂಜಾ ಸಾಮಗ್ರಿಗಳು ಮತ್ತು ಒಂದು ಸೋನಿ ಕ್ಯಾಮರಾವನ್ನು ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 24,000ರೂ. ಎಂದು ಅಂದಾಜಿಸಲಾಗಿದೆ.
ಅಲ್ಲೇ ಸಮೀಪದ ನಟರಾಜ್ ಎಚ್.ಸಿ. ಎಂಬವರ ಲೋಕೋಪಯೋಗಿ ವಸತಿ ಗೃಹದ ಬೀಗ ಮುರಿದು ಒಳನುಗ್ಗಿ ರುವ ಕಳ್ಳರು ಮಲಗುವ ಕೋಣೆಯಲ್ಲಿನ ಕಪಾಟನ್ನು ಒಡೆದು ಅದರಲ್ಲಿದ್ದ 10,000ರೂ. ಮತ್ತು ಚಿನ್ನದ ಮಾಂಗಲ್ಯ ಸರದ ತಾಳಿಬೊಟ್ಟನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 15,000 ರೂ. ಎಂದು ಅಂದಾಜಿಸಲಾಗಿದೆ. ಹೀಗೆ ಒಟ್ಟು ಐದು ಸರಕಾರಿ ವಸತಿಗೃಹಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.