ಚೊಕ್ಕಬೆಟ್ಟು: ಫಲಾನುಭವಿಗಳಿಗೆ ಚೆಕ್ ವಿತರಣೆ
ಸುರತ್ಕಲ್, ಎ.7: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ 2015-16ನೇ ಸಾಲಿನ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶ್ರಮಶಕ್ತಿ, ಕಿರುಸಾಲ, ಮುಖ್ಯಮಂತ್ರಿ ಪರಿಹಾರ ನಿಧಿಯ ಸೌಲಭ್ಯಗಳ ಒಟ್ಟು 1.24 ಕೋ.ರೂ.ಗಳ ಚೆಕ್ಗಳನ್ನು ಶಾಸಕ ಮೊಯ್ದಿನ್ ಬಾವ ಫಲಾನುಭವಿಗಳಿಗೆ ವಿತರಿಸಿದರು.
ಚೊಕ್ಕಬೆಟ್ಟು ಎಂ.ಜೆ.ಎಂ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಚೆಕ್ ವಿತರಿಸಿ ಮಾತನಾಡಿದ ಅವರು, 2015-16ನೆ ಸಾಲಿನಲ್ಲಿ ಶ್ರಮಶಕ್ತಿ ಸಾಲ ಸೌಲಭ್ಯದಲ್ಲಿ ಮುಸ್ಲಿಮ್ ಸಮುದಾಯದ 200 ಫಲಾನುಭವಿಗಳಿಗೆ ತಲಾ 50 ಸಾವಿರದಂತೆ ಹಾಗೂ ಕ್ರಿಶ್ಚಿಯನ್ ಸಮುದಾಯದ 196 ಫಲಾನು ಭವಿಗಳಿಗೆ ತಲಾ 49 ಸಾವಿರ ರೂ.ಗಳಂತೆ ಪರಿಹಾರದ ಚೆಕ್ಗಳನ್ನು ವಿತರಿಸಲಾಗುತ್ತಿದೆ. ಅಂತೆಯೇ, ಕಿರುಸಾಲಕ್ಕೆ ಅರ್ಜಿ ಸಲ್ಲಿಸಿದ್ದ 203 ಮಂದಿ ಫಲಾನುಭವಿಗಳಿಗೆ 20, 30 ಸಾವಿರದಂತೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.
ಈ ಸಂದರ್ಭ ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್ ಪ್ರಥ್ವಿರಾಜ್, ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಸೋಮಪ್ಪ, ಉದ್ಯಮಿ ವೈ. ರಮಾನಂದ ರಾವ್, ಪಂಚಾಯತ್ ಸದಸ್ಯರಾದ ಸುನೀಲ್, ರಝಾಕ್ ಬಾವಾ, ವಾಣಿ, ಮಾಲತಿ ಡಿಸೋಜ, ಮೆಲ್ವಿನ್ ಡಿಸೋಜ, ಶ್ರೀಧರ, ಕರುಣಾಕರ, ಶರೀಫ್ ಮತ್ತಿತರರು ಉಪಸ್ಥಿತರಿದ್ದರು.