ನಾಳೆಯಿಂದ ರಾಷ್ಟ್ರೀಯ ‘ಅಣಕು ನ್ಯಾಯಾಲಯ’ ಸ್ಪರ್ಧೆ
ಉಡುಪಿ, ಎ.7: ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇ ಜಿನ ಆಶ್ರಯದಲ್ಲಿ ನ್ಯಾಯವಾದಿ ಪಿ.ಶಿವಾಜಿ ಶೆಟ್ಟಿ ಸ್ಮರಣಾರ್ಥ ರಾಷ್ಟ್ರೀಯ ‘ಅಣಕು ನ್ಯಾಯಾಲಯ’ ಸ್ಪರ್ಧೆಯನ್ನು ಎ.9 ಮತ್ತು 10ರಂದು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ, ಅಣಕು ನ್ಯಾಯಾಲಯ, ಜಡ್ಜ್ಮೆಂಟ್ ರೈಟಿಂಗ್, ಲೀಗಲ್ ಕ್ವಿಝ್ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆ ಯನ್ನು ಎ.9ರಂದು ಬೆಳಗ್ಗೆ 10ಕ್ಕೆ ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಉದ್ಘಾಟಿಸಲಿರುವರು. ಬೆಂಗಳೂರಿನ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಸೀತಾರಾಮ ಶೆಟ್ಟಿ ಮಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ.
10ರಂದು ಅಪರಾಹ್ನ 3:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಕೇರಳ ಹೈಕೋರ್ಟ್ ನ್ಯಾಯ ಮೂರ್ತಿ ಎ.ಮುಹಮ್ಮದ್ ಮುಷ್ತಾಕ್, ಹಿರಿಯ ವಕೀಲ ಅಶೋಕ್ ಹಾರ್ನಳ್ಳಿ, ಡಾ.ರವೀಂದ್ರನಾಥ್ ಶ್ಯಾನುಭಾಗ್ ಭಾಗವಹಿಸಲಿರುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಯಂತಿ ಶಿವಾಜಿ ಶೆಟ್ಟಿ, ಕಾಲೇಜಿನ ಉಪನ್ಯಾಸಕರಾದ ಡಾ.ವಿಮಲಾ, ರೋಹಿತ್ ಉಪಸ್ಥಿತರಿದ್ದರು.