ಶ್ರೀಲಂಕಾ ಮಹಿಳೆ ಮದುವೆ ಪ್ರಕರಣ, ಮೊದಲ ಪತ್ನಿಯ ಒತ್ತಡಕ್ಕೆ ಮಣಿದ ಪತಿ ಕಾರ್ಕಳದಿಂದ ನಾಪತ್ತೆ
ಕಾರ್ಕಳ; ಶ್ರೀಲಂಕಾ ಮೂಲದ ಪ್ರಸ್ತುತ ಕುವೈಟಿನಲ್ಲಿ ಉದ್ಯೋಗಿಯಾಗಿದ್ದ ಆಹಫಿಯಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ ಜೋಡುಕಟ್ಟೆಯ ನಿವಾಸಿ ಮುಬೀನ್ ಸಯ್ಯದ್ ಯುಸೂಫ್ ಬಳಿಕ ಮೊದಲ ಪತ್ನಿಗೆ ತಿಳಿಸದೇ ಕಾಪುವಿನ ಯುವತಿಯೊಂದಿಗೆ ವಿವಾಹವಾಗಿ ತನಗೆ ಯುಸೂಫ್ ವಂಚಿಸಿದ್ದಾನೆ ಎಂದು ಮೊದಲ ಪತ್ನಿ ಅಹಫಿಯಾ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಸಯ್ಯುದ್ ಯುಸೂಫ್ ಈಕೆಯ ಒತ್ತಡಕ್ಕೆ ಮಣಿದು ಕಾರ್ಕಳದಿಂದ ನಾಪತ್ತೆಯಾಗಿದ್ದಾನೆ.
ಸಯ್ಯದ್ ಮುಬೀನ್ ಯುಸುಫ್ ಕುವೈಟಿನ ತೈಲ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬ್ಯಟಿಶೀಯನ್ ಆಗಿದ್ದ ಕೆ.ಆರ್ ಆಹಫಿಯಾ ಎಂಬವಳನ್ನು ಪ್ರೀತಿಸಿ ಮದುವೆಯಾಗಿ ಆಕೆಯೊಂದಿಗೆ ಒಂದು ವರ್ಷ ಸಂಸಾರ ನಡೆಸಿದ್ದ.ಬಳಿಕ ತನ್ನ ಸಹೋದರಿಯ ಮದುವೆಗೆಂದು ಊರಿಗೆ ಬಂದಿದ್ದ ಸಂದರ್ಭದಲ್ಲಿ ಊರಿನಲ್ಲಿ ಇನ್ನೊಂದು ಮದುವೆಯಾಗಿ ಕುವೈಟಿಗೆ ಹೋಗದೇ ಊರಿನಲ್ಲಿ ನೆಲೆಸಿದ್ದ. ಇತ್ತ ಪತಿ ಯುಸೂಫ್ ಮರಳಿ ಕುವೈಟಿಗೆ ಬಾರದ ಹಿನ್ನಲೆಯಲ್ಲಿ ಪತ್ನಿ ಅಹಫಿಯಾ ಈ ಕುರಿತು ವಿಚಾರಿಸಿದಾಗ ಆತ ಇನ್ನೊಂದು ಮದುವೆಯಾಗಿರುವ ವಿಚಾರ ತಿಳಿದು ಕಾರ್ಕಳಕ್ಕೆ ಬಂದು ತನಗೆ ಯುಸೂಫ್ ವಂಚಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಈ ಪ್ರಕರಣಕ್ಕೆ ಕುರಿತಂತೆ ಯುಸೂಫ್ನನ್ನು ಕರೆಯಿಸಿ ಆಕೆಯ ಸಮ್ಮುಖದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದರು. ಆತ ಇಬ್ಬರೂ ಪತ್ನಿಯರನ್ನು ಸಮಾನವಾಗಿ ನೋಡಿಕೊಳ್ಳುವುದಾಗಿ ಲಿಖಿತ ಹೇಳಿಕೆ ನೀಡಿದ ನಂತರ ಅಹಫಿಯಾ ಮತ್ತೆ ಕುವೈಟಿಗೆ ತೆರಳಿದ್ದಳು.ಆದರೆ ಆತ ಕುವೈಟಿಗೆ ಹೋಗುವುದಾಗಿ ಹೇಳಿ ಮರಳಿ ಬಾರದ ಹಿನ್ನಲೆಯಲ್ಲಿ ಮೊದಲ ಪತ್ನಿ ಅಹಫಿಯಾ ಮತ್ತೆ ತನಗೆ ಪತಿ ಯುಸೂಫ್ ವಂಚಿಸಿದ್ದಾನೆ ಎಂದು ಪೊಲೀಸರಿಗೆ ದೂರವಾಣಿ ಮೂಲಕ ದೂರಿದ ಹಿನ್ನಲೆಯಲ್ಲಿ ಆತ ಇದೀಗ ಕಾರ್ಕಳದಿಂದ ನಾಪತ್ತೆಯಾಗಿದ್ದಾನೆ.
ಪತಿ ಯುಸೂಫ್ ನಾಪತ್ತೆಯಾಗಿರುವ ಕುರಿತು ಅಹಫಿಯಾ ಸಾಕಷ್ಟು ವಿಚಾರಿಸಿದರೂ ಆತನ ಪತ್ತೆಯಾಗದ ಹಿನ್ನಲೆಯಲ್ಲಿ ಅವನ ಮನೆಯವರೇ ಆತನನ್ನು ಬೇರೆಡೆಗೆ ಹೋಗುವಂತೆ ತಿಳಿಸಿದ್ದಾರೆ ಎಂದು ಅಹಫಿಯಾ ಆರೋಪಿಸಿದ್ದಾಳೆ.ಆತ ವಿದೇಶಕ್ಕೆ ಪರಾರಿಯಾಗಿದ್ದಾನೆಯೇ ಅಥವಾ ಭಾರತದಲ್ಲಿ ಅಡಗಿರಬಹುದೇ ಎನ್ನುವ ಕುರಿತು ಮಾಹಿತಿ ಕಲೆಹಾಕುತ್ತಿದ್ದಾಳೆ.