ಮಂಗಳೂರು : ಬಾಳಿಗಾ ಹತ್ಯೆ ಪ್ರಕರಣ, ಸುಪಾರಿ ಹಂತಕ ಶಿವ ಬಂಧನ?
Update: 2016-04-10 17:41 GMT
ಮಂಗಳೂರು, ಎ. 10: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಹತ್ಯೆಗೆ ಸುಪಾರಿ ನೀಡಿದ್ದಾನೆ ಎನ್ನಲಾದ ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆಯ ನಿವಾಸಿ ಶಿವ (29) ಎಂಬಾತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಮಾರ್ಚ್ 21ರಂದು ಬಾಳಿಗಾ ಅವರ ಹತ್ಯೆಯ ಬಳಿಕ ಶಿವ ಸಹಿತ ಕಾವೂರು ಶಾಂತಿನಗರ ಮೈದಾನದ ಬಳಿಯ ಶ್ರೀಕಾಂತ್ (40) ಎಂಬವರು ತಲೆಮರೆಸಿಕೊಂಡಿದ್ದು, ಈ ಪೈಕಿ ಶಿವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹತ್ಯೆಗೆ ಸಂಬಂಧಿಸಿ ಪೊಲೀಸರು ಮಾ.27ರಂದು ವಿನೀತ್ ಪೂಜಾರಿ ಮತ್ತು ವಿಶಿತ್ ದೇವಾಡಿಗ ಎಂಬಿಬ್ಬರನ್ನು ಬಂಧಿಸಿದ್ದರು. ಪೊಲೀಸರ ತನಿಖೆಯಿಂದ ಹಾಗೂ ದೊರೆತಿರುವ ಸಾಕ್ಷಾಧಾರಗಳಿಂದ ಪ್ರರಕಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಶಿವ ಮತ್ತು ಶ್ರೀಕಾಂತ್ ಅವರನ್ನು ವಿಚಾರಣೆಗೊಳಪಡಿಸಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.