ಮಂಗಳೂರು : ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 49.21 ಲಕ್ಷ ರೂ. ವಂಚನೆ
ಮಂಗಳೂರು, ಎ. 10: ಬಡಾವಣೆ ನಿರ್ಮಿಸಲು ಜಮೀನು ನೀಡುವುದಾಗಿ ಹೇಳಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 49,21,500 ರೂ. ಪಡೆದು ವಂಚಿಸಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನಂತ್ ಕಾಮತ್ ಮತ್ತು ಇತರ ಕೆಲವರು ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಬಡಾವಣೆ ನಿರ್ಮಿಸಲು ಚೇಳ್ಯಾರು ಗ್ರಾಮದಲ್ಲಿ ಸರ್ವೆ ನಂಬ್ರ 9/97 ರಲ್ಲಿ 1.93 ಎಕರೆ ಜಮೀನು ನೀಡುವುದಾಗಿ ಹಾಗೂ ಈ ಭೂಮಿಯ ಮೂಲ ಮಾಲಕನಿಂದ ಜಿಪಿಎ ಹೊಂದಿರುವುದಾಗಿಯೂ ನಂಬಿಸಿದ್ದರು. ಆರೋಪಿಗಳು ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 49.21.500 ರೂ. ನಗದನ್ನು ಚೆಕ್ ಮೂಲಕ ಪಡೆದು ಸದ್ರಿ ಭೂಮಿಯನ್ನು ಈ ವರೆಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ನೊಂದಾಯಿಸದೆ ಮೋಸ ಮಾಡಿದ್ದಾರೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಕಮಿಷನರ್ ಮುಹಮ್ಮದ್ ನಾಸಿರ್ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಸಿರ್ ಅವರು ನೀಡಿರುವ ದೂರಿನಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.