ಕಾರು ಢಿಕ್ಕಿ: ಪಾದಚಾರಿ ಮಹಿಳೆ ಮೃತ್ಯು
ಮಂಗಳೂರು, ಎ.11: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಗರದ ಬಿಕರ್ನಕಟ್ಟೆಯಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಬಿಕರ್ನಕಟ್ಟೆಯ ನಿವಾಸಿ ಮಮತಾ (36) ಎಂದು ಗುರುತಿಸಲಾಗಿದೆ. ಇವರು ಇಂದು ಪೂರ್ವಾಹ್ನ 11 ಗಂಟೆ ವೇಳೆಗೆ ಮನೆಯಿಂದ ಬಿಕರ್ನಕಟ್ಟೆಗೆ ತೆರಳಿದ್ದರು. ರಸ್ತೆ ದಾಟಲು ನಿಂತಿದ್ದಾಗ ಕೆಪಿಟಿ ಕಡೆಯಿಂದ ನಂತೂರು ಕಡೆಗೆ ಅತೀ ವೇಗವಾಗಿ ಸಂಚರಿಸುತ್ತಿದ್ದ ಝೈಲೊ ಕಾರು ಮಮತಾರಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಪರಿಣಾಮವಾಗಿ ರಸ್ತೆಗಪ್ಪಳಿಸಿ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತದ ಸಂದರ್ಭ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಸಂತೋಷ್ ಎಂಬವರು ನೀಡಿರುವ ದೂರಿನಂತೆ ಮಂಗಳೂರು ಪೂರ್ವ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.