ಕೊಟ್ಪಾ ವಿರುದ್ಧ ಮತ್ತೆ ಸಿಡಿದೆದ್ದ ಬೀಡಿ ಕಾರ್ಮಿಕರು
ಮಂಗಳೂರು, ಎ.12: ಕೇಂದ್ರ ಸರಕಾರ ಕೊಟ್ಪಾಕಾಯಿದೆಯನ್ನು ಜಾರಿಗೊಳಿಸಬಾರದು, ಬೀಡಿ ಮಾಲಕರು ಕೆಲಸ ಸ್ಥಗಿತಗೊಳಿಸಿರುವುದನ್ನು ರದ್ದುಗೊಳಿಸಿ ಕೆಲಸ ಪ್ರಾರಂಭಿಸಲುವ ನಿರ್ದೇಶನ ನೀಡಬೇಕು ಹಾಗೂ ಬೀಡಿ ಕಾರ್ಮಿಕರಿಗೆ ಕೆಲಸ ಪ್ರಾರಂಭವಾಗುವ ತನಕ ಜೀವನ ನಿರ್ವಹಣೆಗೆ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಬೇಕೆಂದು ಒತ್ತಾಯಿಸಿ ಬೀಡಿ ಕಾರ್ಮಿಕರು ಇಂದು ನಗರದ ಕದ್ರಿಯಲ್ಲಿರುವ ಉಪ ಕಾರ್ಮಿಕ ಆಯುಕ್ತ ಕಚೇರಿಯೆದುರು ಧರಣಿ ನಡೆಸಿದರು.
ಸಿಐಟಿಯು, ಎಐಟಿಯುಸಿ, ಬಿಎಂಎಸ್ ಯೂನಿಯನ್ ಮತ್ತು ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯನ್ನುದ್ದೇಶಿಸಿ ಬಾಲಕೃಷ್ಣ ಶೆಟ್ಟಿ, ಶೇಖರ್ ಬಿ., ವಿಶ್ವನಾಥ ಶೆಟ್ಟಿ, ಮುಹಮ್ಮದ್ ರಫಿ ಮಾತನಾಡಿದರು.
ಈ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಬೀಡಿ ಕಾರ್ಮಿಕರಿಗೆ ಇಂದು ಕಷ್ಟದ ಪರಿಸ್ಥಿತಿ ಬಂದಿದ್ದು, ವಿಧಾನಪರಿಷತ್ನಲ್ಲಿ ಈ ಬಗ್ಗೆ ಸರಕಾರದ ಗಮನಸೆಳೆದಿದ್ದೇನೆ. ಬೀಡಿ ಪ್ಯಾಕೇಟ್ ಮೇಲೆ 85 ಶೇಕಡ ಎಚ್ಚರಿಕೆಯನ್ನು ಹಾಕಲು ಬಿಡುವುದಿಲ್ಲ. ಈ ವಿಚಾರದಲ್ಲಿ ರಾಜಕೀಯ ಮರೆತು ಬೀಡಿ ಕಾರ್ಮಿಕರ ಪರವಾಗಿ ಇರುತ್ತೇನೆ ಎಂದು ಹೇಳಿದರು.