ಪುದು: ತಡೆಗೋಡೆ ಕಾಮಗಾರಿಗೆ ಸಚಿವ ಖಾದರ್ ಚಾಲನೆ
ಬಂಟ್ವಾಳ, ಎ.13: ಪುದು ಗ್ರಾಮದ ಹಲವು ಕಡೆ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿಗಳನ್ನು ನಿರ್ಮಾಣವಾಗಿದ್ದು, ಆ ಮೂಲಕ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಪುದು ಗ್ರಾಮದ ಕುಂಜತ್ಕಲ್ ಪರಿಸರದ ತ್ಯಾಜ್ಯ ನೀರು ಹರಿಯಲು 30 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಪೇರಿಮಾರ್ ಪರಿಸರದ ಮಳೆ ನೀರು ಮತ್ತು ತ್ಯಾಜ್ಯ ನೀರು ಹರಿಯಲು 20 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡುತ್ತಿದ್ದರು. ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾದ ತಡೆಗೋಡೆ ನಿರ್ಮಾಣ ಕಾರ್ಯ ಶೀರ್ಘವೇ ಪೂರ್ಣಗೊಳ್ಳಲಿದೆ. ಗ್ರಾಮದಲ್ಲಿ ಅಗತ್ಯವಿರುವಲ್ಲಿಗೆ ರಸ್ತೆ ಹಾಗೂ ಚರಂಡಿಯನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಫರಂಗಿಪೇಟೆ ಆಟೊ ನಿಲ್ದಾಣಕ್ಕೆ ತಗಡು ಶೀಟ್ ಮೇಲ್ಛಾವಣಿ ನಿರ್ಮಿಸಿಕೊಡುವಂತೆ ಆಟೊ ಚಾಲಕ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ತಾಪಂ ಸದಸ್ಯೆ ಪದ್ಮಶ್ರೀ ದುರ್ಗೇಶ್ ಶೆಟ್ಟಿ, ತಾಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಗ್ರಾಪಂ ಅಧ್ಯಕ್ಷೆ ಆತಿಖಾ, ಉಪಾಧ್ಯಕ್ಷ ಹಾಸಿರ್ ಪೇರಿಮಾರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಲಕ್ಷ್ಮೀ ಅಖ್ತರ್ ಹುಸೈನ್, ಗ್ರಾಪಂ ಸದಸ್ಯರಾದ ರಮ್ಲಾನ್, ದುರ್ಗೇಶ್ ಶೆಟ್ಟಿ, ಫೈಝಲ್, ಲತೀಫ್, ಜಯಂತಿ, ವಸಂತಿ, ಝಾಹಿರ್, ಪ್ರಮುಖರಾದ ಎಂ.ಕೆ.ಮುಹಮ್ಮದ್, ಇಬ್ರಾಹೀಂ ಕುಂಪನಮಜಲ್, ಇಕ್ಬಾಲ್ ಮಾರಿಪಲ್ಲ, ಹುಸೈನ್ ಮಾರಿಪಲ್ಲ, ಬಾವ, ರಫೀಕ್ ಪೇರಿಮಾರ್, ಪೈರೋಝ್ ಎಫ್.ಆರ್., ಜಬ್ಬಾರ್ ಮಾರಿಪಲ್ಲ, ಮುಸ್ತಫಾ ಅಮ್ಮೆಮಾರ್, ಸಲಾಂ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು.