ಕೊಣಾಜೆ: ಮಾನವೀಯ ಮೌಲ್ಯ ಬೆಳೆಸುವ ಕೆಲಸ ಆಗಬೇಕಿದೆ: ಯು.ಟಿ.ಖಾದರ್
ಕೊಣಾಜೆ: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಂಬಿಕೆಯ ಕೊರತೆಯಿಂದಾಗಿ ಮನುಷ್ಯ ಮನುಷ್ಯನನ್ನು ನಂಬುವುದೇ ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ನಾವು ನಮ್ಮ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನು ತಿಳಿದುಕೊಂಡು ನಮ್ಮ ಸಂಸ್ಕೃತಿಯನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಂತಹ ಕೆಲಸ ಆಗಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯ ಪಟ್ಟರು.
ಅವರು ಅಸೈಗೋಳಿಯ ಸಾಯಿ ಪ್ರೆಂಡ್ಸ್ ಇದರ 5ನೇ ವಾರ್ಷಿಕೋತ್ಸವ ಹಾಗೂ ಬಿಸು ಪರ್ಬದ ಆಚರಣೆ ಕಾರ್ಯಕ್ರಮದಲ್ಲಿ ಬುಧವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾನವೀಯತೆ, ಕರುಣೆ, ಸಹನುಭೂತಿಯನ್ನು ಪ್ರತಿಯೊಬ್ಬರು ಬೆಳೆಸಿಕೊಂಡು ಸೌಹಾರ್ದಯುತವಾದ ವಾತಾವರಣವನ್ನು ನಾವು ಸೃಷ್ಟಿಸಬೇಕು. ಅಸೈಗೋಳಿ ಸಾಯಿ ಪ್ರೆಂಡ್ಸ್ ಕಳೆದ ಹಲವಾರು ವರ್ಷದಿಂದ ಪರಿಸರದಲ್ಲಿ ಉತ್ತಮವಾದ ಕೆಲಸದೊಂದಿಗೆ ಸಮಾಜಸೇವೆಯನ್ನು ಮಾಡುತ್ತಾ ಬಂದಿದೆ. ಸಂಘ ಸಂಸ್ಥೆಗಳು ಸಮಾಜಸೇವೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮವನ್ನು ಕಿರುತೆರೆಬಾಲನಟಿ ಕುಮಾರಿ ಬೇಬಿ ದಿಶಾಲಿ ಡಿ.ಪೂಜಾರಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ವೈದ್ಯರಾದ ಡಾ.ಕೃಷ್ಣಪ್ರಸಾದ್, ನಿವೃತ್ತ ಶಿಕ್ಷಕ ಡೆನ್ನಿಡಿಸೋಜಾ ಹಾಗೂ ನವ್ಯಶ್ರೀ ಸ್ತ್ರೀಶಕ್ತಿ ಸಂಘವನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ.ಯುವ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಮಿಥುನ್ ರೈ, ಕೊಣಾಜೆ ಗ್ರಾ.ಪಂ.ಅಧ್ಯಕ್ಷ ಶೌಕತ್ ಆಲಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ನ ಸಂತೋಷ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ನ ಉಳ್ಳಾಲ ವಲಯಾಧ್ಯಕ್ಷ ನಝರ್ ಷಾ ಪಟ್ಟೋರಿ, ಉದ್ಯಮಿ ಪ್ರಸಾದ್ ರೈ ಕಲ್ಲಿಮಾರ್, ಕಿಶೋರ್ ಪೂಜಾರಿ, ರಮಾನಾಥ ಶೆಟ್ಟಿ, ಮಂಜುನಾಥ ಸಾಮಾನಿ, ರಾಜ್ ಕುಮಾರ್, ಸಿ.ಎಂ.ರವೂಫ್, ಬಾಸ್ಕರ್, ಆಸ್ಟಿನ್ ಡಿಸೋಜಾ, ಸುನೀಲ್ ಪೂಜಾರಿ, ಮುಸ್ತಫಾ ಹರೇಕಳ, ರೇಣು ಬೆಂಗಳೂರು, ಶಶಿರಾಜ್ ಕೊಳಂಬೆ, ಶ್ರೀನಿವಾಸ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಕಲಚೇತನ ಮಕ್ಕಳಿಗೆ ವೀಲ್ ಚೆಯರ್ಗಳನ್ನು ವಿತರಿಸಲಾಯಿತು. ಬಳಿಕ ನೌಷದ್ ಬಳಗದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಆನಂದ ಅಸೈಗೊಳಿ ಸ್ವಾಗತಿಸಿ, ತ್ಯಾಗಂ ಹರೇಕಳ ವಂದಿಸಿದರು. ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು.