ಮಂಗಳೂರು: ಅಸಮಾನತೆ ವಿರುದ್ದದ ಅಂಬೇಡ್ಕರ್ ಹೋರಾಟ ಇನ್ನು ಅಗತ್ಯವಿದೆ- ಬಿ.ರಮಾನಾಥ ರೈ

Update: 2016-04-14 13:59 GMT

  ಮಂಗಳೂರು, ಎ.14: ಜಾತಿರಹಿತ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಲ್ಲಿ ಅಂಬೇಡ್ಕರ್ ಅವರು ಅಸಮಾನತೆ ವಿರುದ್ದ ಮಾಡಿದ ಹೋರಾಟವನ್ನು ಬಡವರ, ದಲಿತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಸಬೇಕಾದ ಅಗತ್ಯವಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

     ನಗರದ ಪುರಭವನದಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮನಪಾ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಜಾತಿ ಪದ್ದತಿ ವ್ಯವಸ್ಥೆಯಲ್ಲಿ ಸಮಾಜದ ತಳವರ್ಗದ ಜನರಿಗೆ ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಸಂವಿಧಾನಾತ್ಮಕವಾಗಿ ಶಕ್ತಿ ಕೊಡುವ ಜವಾಬ್ದಾರಿ ನಾಗರಿಕ ಸಮಾಜಕ್ಕಿದೆ ಎಂದು ಹೇಳಿದರು.

ಮಂಗಳೂರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಇದ್ದ ತೊಡಕುಗಳು ನಿವಾರಣೆಯಾಗಿದ್ದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಎ.20 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದಕ್ಕೆ ಬೇಕಾದ ಹಣಕಾಸು ಮಂಜೂರು ಮಾಡಲಾಗಿದೆ.ಮುಖ್ಯಮಂತ್ರಿಗಳು ಮಂಗಳೂರಿಗೆ ಬರುವ ಕಾರ್ಯಕ್ರಮದ ಸಂದರ್ಭದಲ್ಲಿ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಎಲ್ಲಾ ವರ್ಗದ ಜನರಿಗೆ ಅಧಿಕಾರದ ಶಕ್ತಿ ಕೊಟ್ಟಿರುವುದು ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ. ಅವರು ವಿಶ್ವದಲ್ಲಿಯೆ ಅತ್ಯುತ್ತಮವಾದ ಸಂವಿಧಾನವನ್ನು ಕೊಟ್ಟಿದ್ದು ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೆಂದರು. ಆಯಾಯ ಧರ್ಮಕ್ಕೆ ಧರ್ಮಗ್ರಂಥವಿದ್ದರೆ ಭಾರತ ದೇಶಕ್ಕೆ ಸಂವಿಧಾನವೆ ಪವಿತ್ರ ಗ್ರಂಥ. ಸಂವಿಧಾನಕ್ಕೆ ಗೌರವ ಕೊಟ್ಟರೆ ದೇಶಕ್ಕೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ನಾಗರಿಕನು ದೇಶಕ್ಕೆ ,ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಮಾರಕ ಕೆಲಸ ಮಾಡಬಾರದು. ಹೀಗಿದ್ದರೆ ದೇಶ ತನ್ನಿಂತಾನೆ ಮೊದಲನೆ ಸ್ಥಾನಕ್ಕೆ ಏರಲಿದೆ ಎಂದರು.

  ಕಾರ್ಯಕ್ರಮಕ್ಕೂ ಮೊದಲು ಜ್ಯೋತಿಯ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಜಾಥವನ್ನು ಏರ್ಪಡಿಸಲಾಗಿತ್ತು. ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆಮಾಲಾರ್ಪಣೆಗೈದ ನಂತರ ಪುರಭವನದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜೆ.ಆರ್.ಲೋಬೊ ವಹಿಸಿದ್ದರು.

 ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಶ್ವನಾಥ ಅವರು ಅಂಬೇಡ್ಕರ್ ಅವರ ಬಗ್ಗೆ ಮುಖ್ಯ ಭಾಷಣಗೈದರು.

        ಸಮಾರಂಭದಲ್ಲಿ ಶಾಸಕ ಮೊಯ್ದಿನ್ ಬಾವ , ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ ಎಸ್, ದ.ಕ.ಜಿ.ಪಂ ಸಿಇಓ ಪಿ.ಐ.ಶ್ರೀವಿದ್ಯಾ , ದ.ಕ ಜಿಲ್ಲಾ ಎಸ್ ಪಿ ಡಾ.ಶರಣಪ್ಪ ಎಸ್ ಡಿ, ಮನಪಾ ಆಯುಕ್ತ ಡಾ.ಹೆಚ್.ಎನ್ ಗೋಪಾಲಕೃಷ್ಣ, , ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್, ಮೂಡ ಆಯುಕ್ತ ಮೊಹಮ್ಮದ್ ನಝೀರ್, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಡಿಎಫ್ ಒ ಡಾ.ಹನುಮಂತಪ್ಪ, ಮಂಗಳೂರು ಸಹಾಯಕ ಕಮೀಷನರ್ ಡಾ.ಅಶೋಕ್ ,ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಿ, ಕಾಂತರಾಜು ಮೊದಲಾದವರು ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಜಿ.ಸಂತೋಷ್ ಕುಮಾರ್ ಸ್ವಾಗತಿಸಿದರು, ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

   ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಿಶ್ವನಾಥ್ ಅವರು ದೇಶದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಆಡಳಿತಕ್ಕೆ ಬಂದರೂ ದಲಿತ ಸಮುದಾಯಕ್ಕೆ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ. ಹೋರಾಟಗಳಿಗೆ ಬೆಲೆಯೂ ಸಿಕ್ಕಿಲ್ಲ. ದಲಿತ ಸಮುದಾಯ ಎದುರಿಸುತ್ತಿರುವ ಅಸಮಾನತೆಯ ವಿಮೋಚನೆಗೆ ಪ್ರತ್ಯೇಕ ಮತದಾನ ವ್ಯವಸ್ಥೆಯಾಗಬೇಕಾದ ಪರಿಸ್ಥಿತಿಯಿದೆ ಎಂದು ಹೇಳಿದರು.

ದಲಿತ ಸಮುದಾಯದ ವಿಮೋಚನೆಗೆ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು. ಈ ಸಮುದಾಯ ಬಲಿಷ್ಠವಾಗಿದ್ದು,ಸಮಾಜ ಉದ್ಧಾರಕ್ಕಾಗಿ ನಾಯಕರು ಹೊರಹೊಮ್ಮಬೇಕು ಅದಕ್ಕಾಗಿ ಪ್ರತ್ಯೇಕ ಮತದಾನ ವ್ಯವಸ್ಥೆ ಜಾರಿಯಾಗಬೇಕು ಎಂದರು.

  ನ್ಯಾಷನಲ್ ಕ್ರೈಂ ಬ್ಯೂರೊ ಹೊರಹಾಕಿದ ವರದಿಯಲ್ಲಿ 2014-15ರಲ್ಲಿ 754 ಮಂದಿ ದಲಿತರ ಕೊಲೆಯಾಗಿದೆ. 2ಸಾವಿರಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ. 47ಸಾವಿರಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇವೆಲ್ಲವನ್ನು ಗಮನಿಸಿದಾಗ ದಲಿತ ಸಮುದಾಯ ಎಂತಹ ಪರಿಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತದೆ.ಆದ್ದರಿಂದ ಪ್ರತ್ಯೇಕ ಮತದಾನ ಚಳುವಳಿ ಅಗತ್ಯವಿದೆ ಎಂದು ಹೇಳಿದರು.

    ಪ್ರಸ್ತುತ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಕೋಮುವಾದಿಗಳ ಕೈಯಲ್ಲಿ ಸಿಲುಕಿದ್ದಾರೆ. ರಾಜಕೀಯ ದುರುದ್ದೇಶದಿಂದ ಡಾ.ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸಮುದಾಯ ಎಚ್ಚರದಿಂದಿರಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News