ಪುತ್ತೂರು: ಶೀಲ ಶಂಕಿಸಿ ಪತ್ನಿಯ ಕೊಲೆ

Update: 2016-04-14 14:09 GMT

ಪುತ್ತೂರು: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಪತಿಯೇ ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣ ಗುರುವಾರ ಸರ್ವೆ ಗ್ರಾಮದ ಬೈರರಗುರಿ ಎಂಬಲ್ಲಿ ಬೆಳಕಿಗೆ ಬಂದಿದೆ. ಬೈರರಗುರಿ ನಿವಾಸಿ ವಿಜಯ ಎಂಬಾತನ ಪತ್ನಿ ಭಾಗೀರಥಿ (31) ಕೊಲೆಯಾದ ಮಹಿಳೆ. ಪತಿ ವಿಜಯ (38) ಪತ್ನಿಯನ್ನು ಕೊಲೆಗೈದ ಆರೋಪಿ. ವಿಜಯ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಪತ್ನಿಯ ಶೀಲ ಶಂಕಿಸಿ ಆಕೆಯೊಂದಿಗೆ ಜಗಳವಾಡುತ್ತಿದ್ದನು. ಈ ದಂಪತಿಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

ವಿಜಯ ಬುಧವಾರ ರಾತ್ರಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಈ ವಿಚಾರವನ್ನು ಕುಡಿದ ಮತ್ತಿನಲ್ಲಿ ರಾತ್ರಿ ಸ್ಥಳೀಯರಿಗೆ ತಿಳಿಸಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪುತ್ತೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು, ಆರೋಪಿ ಪತಿ ವಿಜಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಹಾಗೂ ಕೊಲೆ ಮಾಡಲು ಬಳಸಿದ ಕತ್ತಿಯನ್ನು ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್, ಪುತ್ತೂರು ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಎಸ್. ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ತನಿಖಾ ಕ್ರಮಗಳನ್ನು ಕೈಗೊಂಡರು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News