ವಲಸೆ ಮಕ್ಕಳಿಗಾಗಿ ಹಾಸ್ಟೆಲ್ ನಿರ್ಮಾಣ: ವನಿತಾ ತೊರವಿ
ಉಡುಪಿ, ಎ.16: ಹೊರ ರಾಜ್ಯಗಳಿಂದ ಬರುವ ವಲಸೆ ಮಕ್ಕಳಿಗೆ ವಸತಿ ಹಾಗೂ ಊಟದ ಜೊತೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಹಾಸ್ಟೆಲ್ಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ತಿಳಿಸಿದ್ದಾರೆ.
ಉಡುಪಿಯ ಬಾಲಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರ ರಾಜ್ಯಗಳ ಮಕ್ಕಳು ಭಾಷೆಯ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಈ ಹಾಸ್ಟೆಲ್ಗಳನ್ನು ನಿರ್ಮಿಸಲಾಗುತ್ತಿದೆ. ಮುಂದೆ ಇದನ್ನು ಜಿಲ್ಲಾಮಟ್ಟದಲ್ಲೂ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಎಲ್ಲ ಕಡೆಗಳಲ್ಲಿ ಭಿಕ್ಷಾಟನೆ ಮಾಡುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಪೋಷಕರೇ ಇದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಕಂಡುಬಂದಿದೆ. ಭಿಕ್ಷಾಟನೆ ಅಪರಾಧವಾಗಿರುವುದರಿಂದ ಪೊಲೀಸ್ ಇಲಾಖೆ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು. ಅದೇ ರೀತಿ ಸಾರ್ವಜನಿಕರು ಮಕ್ಕಳಿಗೆ ಭಿಕ್ಷೆ ಹಾಕುವುದನ್ನು ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಶಾಲೆ ಕಡೆ - ನನ್ನ ನಡೆ: ಆಯೋಗವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರುವ ಶಾಲೆ ಕಡೆ - ನನ್ನ ನಡೆ ಜನಾಂದೋಲನವನ್ನು ಹಮ್ಮಿ ಕೊಂಡಿದೆ. ಈ ತಿಂಗಳ ಕೊನೆಯ ವಾರ ದಲ್ಲಿ ಉಡುಪಿ ಜಿಲ್ಲೆಯಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ವನಿತಾ ತಿಳಿಸಿದರು.
ರಾಜ್ಯದಲ್ಲಿ ಸುಮಾರು 9,000 ಮಕ್ಕಳು ಶಾಲೆ ಯಿಂದ ಹೊರಗುಳಿದಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯ ಬಹ್ಮಾವರದಲ್ಲಿ 6, ಬೈಂದೂರು- 6, ಕಾರ್ಕಳ -8, ಕುಂದಾಪುರ-34, ಉಡುಪಿ - 0 ಮಕ್ಕಳು ಶಾಲೆಯಿಂದಹೊರ ಗುಳಿದಿದ್ದು, ಇವರನ್ನು ಮತ್ತೆ ಶಾಲೆಗೆ ಸೇರಿಸುವುದು ಈ ಆಂದೋಂ ಲನದ ಗುರಿಯಾಗಿದೆ. ಆ ನಿಟ್ಟಿನಲ್ಲಿ ಬೀದಿನಾಟಕ, ಜಾಥಾವನ್ನು ನಡೆಸಿ ಅರಿವು ಮೂಡಿಸ ಲಾಗುವುದು. ಹೊಟೇಲ್, ಕಟ್ಟಡ ಮಾಲಕರ ಸಭೆ ಕರೆದು ಬಾಲ ಕಾರ್ಮಿಕರನ್ನು ದೂರ ಇಡುವಂತೆ ಸೂಚಿಸಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಹಿಳಾ ಮಕ್ಕಳ ಅಭಿವೃದ್ಧ್ದಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲಿಸ್, ಉಡುಪಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯ ದರ್ಶಿ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.