ಬೆಳೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಪಡುಬಿದ್ರಿ, ಎ.17: ಉಡುಪಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕವು ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಉಚಿತ ಬೀಜ ವಿತರಣೆ ಮತ್ತು ಬೆಳೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಎಲ್ಲೂರು ಗ್ರಾಮದ ಕೆಮುಂಡೆಲು ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಜರಗಿತು.
ಶಾಲೆಯ 87 ವಿದ್ಯಾರ್ಥಿಗಳು ಬೆಳೆದ ತರಕಾರಿ ಬೆಳೆಯನ್ನು ವೀಕ್ಷಿಸಿದ ಕಿಸಾನ್ ಘಟಕ ತಂಡವು ಉತ್ತಮವಾಗಿ ತರಕಾರಿ ಬೆಳೆದ ವಿದ್ಯಾರ್ಥಿಗಳಿಗೆ ಬಹುಮಾನ ಘೋಷಿಸಿತು. 7ನೆ ತರಗತಿಯ ಅನನ್ಯಾ ಪ್ರಥಮ, ಶರಣ್ ಹಾಗೂ ನಿರಂಜನ್ ದ್ವಿತೀಯ ಮತ್ತು ಆದಿತ್ಯ ತೃತೀಯ ಬಹುಮಾನವನ್ನು ಪಡೆದರು.
ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಕುಂಜೂರು ಮೋಹನ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕೃಷಿ ಪಂಡಿತ ಪುಶಸ್ತಿ ಪುರಸ್ಕೃತ ರಾಘವೇಂದ್ರ ನಾಯಕ್ ಶಿರ್ವ ಲಾಭದಾಯಕ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕಿಸಾನ್ ಘಟಕದ ಕಾರ್ಯದರ್ಶಿ ಉದಯ ಹೆರೂರು, ಶಾಲಾ ವ್ಯವಸ್ಥಾಪಕ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.