ದಿವಾಕರ ಶಾಸ್ತ್ರಿಗೆ ಸಮನ್ಸ್ ಜಾರಿ
ಪುತ್ತೂರು: ಬಂಟ್ವಾಳ ಕೆದಿಲ ಗ್ರಾಮದ ಬಡೆಕ್ಕಿಲ ಶ್ಯಾಮ ಶಾಸ್ತ್ರಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಶ್ಯಾಮ ಶಾಸಿಯವರ ಸಹೋದರ ದಿವಾಕರ ಶಾಸ್ತ್ರಿಯ ವಿರುದ್ಧ ಕೊಲೆಯಲ್ಲದ ಮಾನವ ಹತ್ಯೆ, ಅಪರಾಧದ ಸಂಚು ರೂಪಿಸಿದ ಮತ್ತು ಸಾಕ್ಷ್ಯ ನಾಶದ ಪ್ರಕರಣವನ್ನು ದಾಖಲಿಸಿ ದಿವಾಕರ ಶಾಸ್ತ್ರಿಗೆ ಸಮನ್ಸ್ ಜಾರಿ ಮಾಡುವಂತೆ ಪುತ್ತೂರು ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಬಂಟ್ವಾಳ ತಾಲೂಕಿನ ಪಡ್ನೂರು ನಿವಾಸಿ ಗೋವಿಂದ ಶಾಸ್ತ್ರಿ ಅವರು ಶ್ಯಾಮ್ ಪ್ರಸಾದ್ ಶಾಸ್ತ್ರಿ ಅವರ ಸಾವಿನ ಪ್ರಕರಣದಲ್ಲಿ ಮೂಲಭೂತ ಸಂಶಯಗಳನ್ನು ವ್ಯಕ್ತಪಡಿಸಿ ಈ ಪ್ರಕರಣದಲ್ಲಿ ದಿವಾಕರ ಶಾಸ್ತ್ರಿ ಅವರ ಪಾತ್ರ ಇದೆ ಎಂದು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಮ್ಮೆ ತಡೆಯಾಜ್ಞೆ ಬಂದಿತ್ತಾದರೂ ಸೋಮವಾರ ಪುತ್ತೂರು ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ದಿವಾಕರ ಶಾಸ್ತ್ರಿಗೆ ಸಮನ್ಸ್ ಜಾರಿಗೊಳಿಸುವಂತೆ ಆದೇಶಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರರು ನೀಡಿರುವ ದೂರಿನ ಅಂಶಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಇದು ಪುರಾವೆ ಒದಗಿಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಾಕರ ಶಾಸ್ತ್ರಿ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯಂತೆ ಶಾಮ ಶಾಸ್ತ್ರಿ ಮನೆಯಲ್ಲಿ ಇದ್ದ ಕೋವಿಯ ಕುರಿತೂ ತನಿಖೆ ನಡೆಯಲಿದೆ ಎಂದು ತಿಳಿದು ಬಂದಿದೆ.